ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷದ ವಿಚಾರವಾಗಿ ಅನುವಂಶಿಕ (ಜೆನೆಟಿಕ್ಸ್) ಪ್ರಯೋಗಾಲಯಗಳನ್ನು ತೆರೆಯುವಂತೆ ವನ್ಯಜೀವಿ ವಿಜ್ಞಾನಿ ಡಾ. ಸಂಜಯ್ ಗುಬ್ಬಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವುದು ತಿಳಿದಿರುವ ವಿಷಯವೇ. ಅದರಲ್ಲೂ ದೊಡ್ಡ ಮಾಂಸಾಹಾರಿ ಪ್ರಾಣಿಗಳಾದ ಹುಲಿ ಮತ್ತು ಚಿರತೆ ಸಂಘರ್ಷ ಕೂಡ ಹೆಚ್ಚಿದೆ. ಈ ದೊಡ್ಡ ಮಾಂಸಾಹಾರಿ ಪ್ರಾಣಿಗಳಿಂದ ಇತ್ತೀಚಿಗೆ ಸಾವಿಗೀಡಾಗುತ್ತಿರುವವರ ಮತ್ತು ಗಂಭೀರವಾಗಿ ಗಾಯಗೊಳ್ಳುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇಂತಹ ಸಂದರ್ಭಗಳಲ್ಲಿ ಸಾವಿಗೆ ಅಥವಾ ಗಾಯಕ್ಕೆ ಕಾರಣವಾದ ಪ್ರಾಣಿಯನ್ನು ಹಿಡಿದು ಪುನರ್ವಸತಿ ಕೇಂದ್ರಗಳಿಗೆ ಕೊಂಡೊಯ್ಯಲಾಗುತ್ತದೆ. ಕೆಲವೊಮ್ಮೆ ಹಲವಾರು ಪ್ರಾಣಿಗಳನ್ನು ಸೆರೆಹಿಡಿದರೂ ಮಾನವ ಸಾವು ಕಡಿಮೆಯಾಗಿರುವುದಿಲ್ಲ (ಉ.ದಾ. 2020ರಲ್ಲಿ ತುಮಕೂರು ಜಿಲ್ಲೆಯ ಹೆಬ್ಬೊರಿನ ಬಳಿ ಚಿರತೆಗಳಿಂದ ಆರು ಜನರ ಸಾವು, ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಇತ್ತೀಚಿಗೆ ನಡೆದ ಘಟನೆಗಳು). ಈ ಸನ್ನಿವೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ನಿರ್ದಿಷ್ಟ ಪ್ರಾಣಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತದೆ. ಇದೊಂದು ಮಾದರಿ ಪದ್ದತಿಯಾದರೂ ಹಲವು ಬಾರಿ ಸಾವಿಗೆ/ಗಾಯಕ್ಕೆ ಕಾರಣವಾದ ಪ್ರಾಣಿ ಬೇರೆಯಾಗಿರುವ ಸಾಧ್ಯತೆಗಳಿವೆ.
ದೊಡ್ಡ ಮಾಂಸಾಹಾರಿ ಪ್ರಾಣಿಗಳು ಬಲಿಪ್ರಾಣಿಯನ್ನು ಬೇಟೆಯಾಡಿದಾಗ ಕಳೇಬರವನ್ನು ತಿನ್ನಲು ಇತರ ದೊಡ್ಡಮಾಂಸಾಹಾರಿ ಪ್ರಾಣಿಗಳು ಕೂಡ ಬರುತ್ತವೆ. ಉದಾಹರಣೆಗೆ ಹುಲಿ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತಿನ್ನಲು ಬೇರೆ ಹುಲಿಯೋ ಅಥವಾ ಚಿರತೆಯೊ ಬರುತ್ತವೆ, ಹಾಗೆಯೇ ಚಿರತೆ ಬೇಟೆಯಾಡಿದ ಪ್ರಾಣಿಯ ಕಳೇಬರವನ್ನು ಹುಲಿಗಳು ಅಥವಾ ಇತರ ಚಿರತೆಗಳು ತಿನ್ನಲು ಬರುವುದು ಸಾಮಾನ್ಯ. ಮಾಂಸಾಹಾರಿ ಪ್ರಾಣಿಗಳ ಈ ನಡವಳಿಕೆಯ ಹಿನ್ನಲೆಯಲ್ಲಿ ಕೆಲ ಬಾರಿ ತಪ್ಪು ಪ್ರಾಣಿಗಳನ್ನು ಸೆರೆ ಹಿಡಿಯುವ ಸಾಧ್ಯತೆಗಳಿವೆ ಮತ್ತು ಇಂತಹ ಸನ್ನಿವೇಶಗಳಲ್ಲಿ ಮನುಷ್ಯರನ್ನು ಹುಲಿ ಅಥವಾ ಚಿರತೆ ಹಿಡಿಯುವುದು ಕಡಿಮೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಕ್ಯಾಮರಾ ಟ್ರ್ಯಾಪ್ ಚಿತ್ರಗಳೊಡನೆ ಪ್ರಾಣಿಗಳ ಅನುವಂಶಿಕ (ಜೆನೆಟಿಕ್) ಮಾದರಿಗಳನ್ನು (ಕೂದಲು, ಎಂಜಲು, ಹಿಕ್ಕೆ) ಸಂಗ್ರಹಿಸಿ ಸಾವಿಗೆ ಅಥವಾ ಗಾಯಪಡಿಸಿದ ಪ್ರಾಣಿಯನ್ನು ನಿಖರವಾಗಿ ಪತ್ತೆ ಮಾಡಬಹುದು. ಈಗ ಸಂಗ್ರಹಿಸುತ್ತಿರುವ ಅನುವಂಶಿಕ ಮಾದರಿಗಳನ್ನು ಡೆಹ್ರಾಡೂನ್ ಅಥವಾ ಹೈದರಾಬಾದಿನಲ್ಲಿರುವ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ ಮತ್ತು ಮಾದರಿಗಳ ಫಲಿತಾಂಶ ಬರಲು ಹಲವಾರು ವಾರಗಳೇ ಆಗುತ್ತವೆ. ಅಷ್ಟರಲ್ಲಿ ಸಂಘರ್ಷ ಹೆಚ್ಚಿರುತ್ತದೆ ಅಥವಾ ಪ್ರಾಣಿಯನ್ನು ಆಗಲೇ ಹಿಡಿಯಲಾಗಿರುತ್ತದೆ.
ಈ ಹಿನ್ನಲೆಯಲ್ಲಿ ಅನುವಂಶಿಕ ಪ್ರಯೋಗಾಲಯಗಳನ್ನು ಅರಣ್ಯ ಇಲಾಖೆಯ ಅಡಿಯಲ್ಲಿ ಕರ್ನಾಟಕದಲ್ಲೇ (ಬೆಂಗಳೂರು ಅಥವಾ ಮೈಸೂರಿನಲ್ಲಿ) ಸ್ಥಾಪಿಸಿಬೇಕು ಅಥವಾ ಕರ್ನಾಟಕದಲ್ಲಿರುವ ವನ್ಯಜೀವಿಗಳ ಅನುವಂಶಿಕ ಪರೀಕ್ಷೆ ಮಾಡುವ ವೈಜ್ಞಾನಿಕ ಸಂಸ್ಥೆಗಳೊಡನೆ (ಉ.ದಾ. ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಹೆಬ್ಬಾಳ, ಬೆಂಗಳೂರು) ಒಡಂಬಡಿಕೆ ಮಾಡಿಕೊಂಡು ತ್ವರಿತವಾಗಿ ಪರೀಕ್ಷೆಗಳ ಫಲಿತಾಂಶ ಪಡೆದು, ಹಿಡಿದ ವನ್ಯಜೀವಿಗಳಿಗೆ (ಹುಲಿ/ಚಿರತೆ) ಹೋಲಿಸಿ ವೈಜ್ಞಾನಿಕವಾಗಿ ಉತ್ತರಗಳನ್ನು ಕೊಂಡುಕೊಳ್ಳಬಹುದು. ಇದರಿಂದ ಜನ ಮತ್ತು ವನ್ಯಜೀವಿಗಳಿಗೆ ಇಬ್ಬರಿಗೂ ಒಳಿತಾಗಲಿದೆ. ಹಾಗಾಗಿ ರಾಜ್ಯದಲ್ಲೇ ಅನುವಂಶಿಕ ಪ್ರಯೋಗಾಲಯವನ್ನು ತತ್ ಕ್ಷಣ ತೆಗೆಯಲು ಕ್ರಮ ಕೈಗೊಳ್ಳಬೇಕೆಂದು ಡಾ. ಸಂಜಯ್ ಗುಬ್ಬಿ ವಿನಂತಿಸಿದ್ದಾರೆ.
ಏಕಕಾಲದಲ್ಲಿ 2 ಸರ್ಕಾರಿ ಕೆಲ್ಸ ಪಡೆದ ವಾಚ್ಮನ್: ಕೇವಲ 9000 ಪಡೆಯುತ್ತಿದ್ದವನ ಸದ್ಯದ ಸಂಬಳ ಇಷ್ಟೊಂದಾ!
ಲೆಮನ್ ಜ್ಯೂಸ್ ಕುಡಿಯುವಾಗ ಅಪ್ಪಿತಪ್ಪಿ ಈ ತಪ್ಪನ್ನು ಮಾಡ್ಬೇಡಿ… ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್!