ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ಚಲಾಯಿಸುವ ಜಾದೂ ಸಾಹಸವನ್ನು ಆರಂಭಿಸಿರುವ ಹೈದರಾಬಾದ್ನ ಜಾದೂಗಾರ ರಾಮಕೃಷ್ಣ ಸೋಮವಾರ ಮಂಗಳೂರಿಗೆ ಆಗಮಿಸಿದರು.
ವಿಸ್ಮಯ ಜಾದೂ ಪ್ರತಿಷ್ಠಾನ, ಎವನ್ ಲಾಜಿಕ್, ಜೆಸಿಐ ಮಂಗಳೂರು-ಲಾಲ್ಬಾಗ್, ಮಂಗಳಾ ಮ್ಯಾಜಿಕ್ ವರ್ಲ್ಡ್ ಸಂಸ್ಥೆ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ಭಾರತ್ ಸಂದೇಶ್ ಯಾತ್ರ ಹೆಸರಿನ ಈ ಜಾದೂ ಪಯಣವು ಮಾ.19ರಂದು ಹೈದಾರಾಬಾದ್ನಲ್ಲಿ ಆರಂಭಗೊಂಡಿದ್ದು, 31 ದಿನಗಳಲ್ಲಿ 10 ಸಾವಿರ ಕಿ.ಮೀ ಕ್ರಮಿಸುವ ಗುರಿ ಹೊಂದಿದೆ. ಭಾರತದ 19 ರಾಜ್ಯಗಳನ್ನು ಹಾಗೂ 121 ಜಿಲ್ಲೆಗಳನ್ನು ಹಾದು ಹೋಗಲಿದೆ. ಕರೊನಾ ಎಚ್ಚರಿಕೆ, ರಸ್ತೆ ಸುರಕ್ಷತೆ ಹಾಗೂ ರಾಷ್ಟ್ರ ಪ್ರೇಮದ ಸಂದೇಶಗಳನ್ನು ಭಾರತ ಸಂದೇಶ್ ಯಾತ್ರೆಯಲ್ಲಿ ನೀಡಲಾಗುವುದು ಎಂದು ರಾಮಕೃಷ್ಣ ಹೇಳಿದರು.
ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ, ಭಾರತ ಸಂದೇಶ್ ಯಾತ್ರೆಯನ್ನು ಕೈಗೊಂಡಿರುವ ಜಾದೂಗಾರ ರಾಮಕೃಷ್ಣ ಭಾರತೀಯ ಜಾದೂ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಜೆಸಿಐ ಮಂಗಳೂರು ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾಗೂ ಎವನ್ ಲಾಜಿಕ್ ಸಂಸ್ಥೆಯ ಪ್ರವೀಣ್ ಉಡುಪ ಮತ್ತು ಮಂಗಳಾ ಮ್ಯಾಜಿಕ್ ವರ್ಲ್ಡ್ ಮುಖ್ಯಸ್ಥ ರಾಜೇಶ್ ಮಳಿ ಶುಭ ಹಾರೈಸಿದರು. ಜೆಸಿಐ ಮಂಗಳೂರು ಲಾಲ್ಬಾಗ್ ಸ್ಥಾಪಕ ಅಧ್ಯಕ್ಷ ಪೀಟರ್ ಪಿಂಟೊ ಉಪಸ್ಥಿತರಿದ್ದರು.
ವಿಸ್ಮಯ ಜಾದೂ ಪ್ರತಿಷ್ಠಾನ ಹಾಗೂ ಜೆಸಿಐ ಸಂಸ್ಥೆ ವತಿಯಿಂದ ಜಾದೂಗಾರ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಅವರು ವಿವಿಧ ಸಾಮಾಜಿಕ ಸಂದೇಶಗಳನ್ನು ಸಾರುವ ಜಾದೂಗಳನ್ನು ಪ್ರದರ್ಶಿಸಿ ನೆರೆದವರನ್ನು ರಂಜಿಸಿದರು.
ಹತ್ತಿ ಉಂಡೆ ಇರಿಸಿ ಕಪ್ಪುಪಟ್ಟಿ: ಸಾರ್ವಜನಿಕರ ಸಮ್ಮುಖದಲ್ಲಿ ರಾಮಕೃಷ್ಣ ಅವರ ಕಣ್ಣುಗಳ ಮೇಲೆ ಹತ್ತಿ ಉಂಡೆ ಇರಿಸಿ ಕಪ್ಪುಪಟ್ಟಿಯಿಂದ ಬಿಗಿದು ಕಟ್ಟಲಾಯಿತು. ಬಳಿಕ ಇಡಿ ತಲೆಯನ್ನು ಕಪ್ಪು ಚೀಲದಿಂದ ಮುಚ್ಚಲಾಯಿತು. ಇದೇ ಸ್ಥಿತಿಯಲ್ಲಿ ಬೈಕ್ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸಾಗುವ ಭಾರತ ಸಂದೇಶ ಯಾತ್ರೆಯನ್ನು ಮುಂದುವರಿಸಿದರು.