ಬೆಂಗಳೂರು: ದೆಹಲಿಯಲ್ಲಿ ಮಹಿಳೆಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಎಳೆದೊಯ್ದು, ಆಕೆ ಸಾವಿಗೀಡಾದ ಆಘಾತಕಾರಿ ಪ್ರಕರಣವೊಂದು ಮಾಸುವ ಮುನ್ನವೇ ಇದೀಗ ರಾಜ್ಯ ರಾಜಧಾನಿಯಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದೆ.
ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಟಾಟಾ ಸುಮೋ ಕಾರಿಗೆ ಡಿಕ್ಕಿ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಕಾರಿನ ಡ್ರೈವರ್ ಪ್ರಶ್ನಿಸುತ್ತಿದ್ದಂತೆ ಸವಾರ ಸ್ಕೂಟರ್ ಹತ್ತಿ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ಸವಾರನನ್ನು ಹಿಡಿಯಲು ಟಾಟಾ ಸುಮೋ ಚಾಲಕ ಮುಂದಾಗಿದ್ದಾನೆ. ಇದಕ್ಕಾಗಿ ಸ್ಕೂಟರ್ನನ್ನು ಹಿಂದಿನಿಂದ ಹಿಡಿದುಕೊಂಡಿದ್ದಾನೆ. ಆದರೆ ಸ್ಕೂಟರ್ ಸವಾರ ಮಾತ್ರ ಸ್ಥಳದಿಂದ ಪರಾರಿಯಾಗುವ ಯತ್ನದಲ್ಲಿ ತನ್ನ ಸ್ಕೂಟರ್ನಲ್ಲೆ ಚಾಲಕನನ್ನು ಎಳೆದೊಯ್ದಿದ್ದಾನೆ. ಸಾಹಿಲ್ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಮುತ್ತಪ್ಪ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಚಾಲಕನೊಬ್ಬನನ್ನು ಎಳೆದೊಯ್ದ ಬೈಕ್ ಸವಾರ#Bengaluru pic.twitter.com/AO6eIdmnT2
— Vijayavani (@VVani4U) January 17, 2023
ಈ ಆಘಾತಕಾರಿ ಘಟನೆ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಸ್ಕೂಟರ್ ಸವಾರ ಚಾಲಕನನ್ನು ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನು ಸ್ಕೂಟರ್ನಲ್ಲಿ ಎಳೆದೊಯ್ಯುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ. ರಾಂಗ್ ಸೈಡ್ನಲ್ಲಿ ಬಂದ ಸ್ಕೂಟರ್ ಚಾಲಕ ಟಾಟಾ ಸುಮೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಸವಾರ ತನ್ನ ಸ್ಕೂಟರ್ನಲ್ಲಿ ಚಾಲಕನನ್ನು ಎಳೆದೊಯ್ಯುತ್ತಿರುವ ದೃಶ್ಯವನ್ನು ನೋಡಿದ ಸಾರ್ವಜನಿಕರು ಅಡ್ಡಗಟ್ಟಿ ತಡೆದಿದ್ದಾರೆ. ಈತನ ವರ್ತನೆಯಿಂದ ಆಕ್ರೋಶಗೊಂಡ ಇತರೆ ಸವಾರರು ಸ್ಥಳದಲ್ಲೇ ಸವಾರನಿಗೆ ಥಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.
ಸಾರ್ವಜನಿಕರಿಂದ ಧರ್ಮದೇಟು ತಿಂದ ಬೈಕ್ ಸವಾರ ಹಾಗೂ ಸಂತ್ರಸ್ತ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ಸಾಹಿಲ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.