ನವದೆಹಲಿ: ಹೈದರಾಬಾದ್ ಮೂಲದ ಟ್ರಾನ್ಸ್ಟ್ರಾಯ್ ಇಂಡಿಯಾ ಲಿಮಿಟೆಡ್ ಮತ್ತು ಇದರ ನಿರ್ದೇಶಕರ ವಿರುದ್ಧ -ಠಿ; 7,926 ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ. ಇದು ಬ್ಯಾಂಕಿಂಗ್ ವಂಚನೆಯ ದೊಡ್ಡ ಪ್ರಕರಣ ಎಂದು ಸಿಬಿಐ ಹೇಳಿದೆ. ಟ್ರಾನ್ಸ್ಟ್ರಾಯ್ ಇಂಡಿಯಾ ಸಂಸ್ಥೆ ಮತ್ತು ಅದರ ನಿರ್ದೇಶಕರಿಗೆ ಸಂಬಂಧಿತ ಹೈದರಾಬಾದ್, ಗುಂಟೂರಿನ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದ್ದು, ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಈ ಕಂಪನಿಗೆ ಸಾಲ ನೀಡಿ ವಂಚನೆಗೆ ಒಳಗಾಗಿರುವ ಬ್ಯಾಂಕ್ಗಳು ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಟ್ರಾನ್ಸ್ಟ್ರಾಯ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಚೆರುಕುರಿ ಶ್ರೀಧರ್, ಹೆಚ್ಚುವರಿ ನಿರ್ದೇಶಕರಾದ ರಾಯಪತಿ ಸಾಂಬಶಿವ ರಾವ್ ಮತ್ತು ಅಕ್ಕಿನೇನಿ ಸತೀಶ್ ವಿರುದ್ಧ ಎಫ್ಎಫ್ಆರ್ ದಾಖಲಾಗಿದೆ. ಸುಳ್ಳು ದಾಖಲೆ, ನಕಲಿ ಲೆಕ್ಕಪತ್ರ ತೋರಿಸಿ ಅನೇಕ ಬ್ಯಾಂಕ್ಗಳಿಂದ ದೊಡ್ಡ ಮೊತ್ತದ ಸಾಲ ಪಡೆದಿರುವ ಆರೋಪ ಇವರ ಮೇಲಿದೆ ಎಂದು ಸಿಬಿಐ ವಕ್ತಾರ ಆರ್.ಕೆ. ಗೌರ್ ಹೇಳಿದ್ದಾರೆ.
ಇದನ್ನೂ ಓದಿ: ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ
ಲಂಡನ್ನಲ್ಲಿ ಬಂಧನದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ವಿರುದ್ಧ 6 ಸಾವಿರ ಕೋಟಿ ರೂ. ಮತ್ತು ಈತನ ಸಂಬಂಧಿ ಮೆಹುಲ್ ಚೋಕ್ಸಿ ವಿರುದ್ಧ 7,080.86 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆಯ ಪ್ರಕರಣ ದಾಖಲಾಗಿರುವುದು ಈವರೆಗಿನ ದೊಡ್ಡ ಮೊತ್ತವಾಗಿತ್ತು ಎಂದು ಸಿಬಿಐ ಹೇಳಿದೆ.
- ಹೈದರಾಬಾದ್ ಮೂಲದ ಕಂಪನಿ ವಿರುದ್ಧ ಪ್ರಕರಣ
- ನೀರವ್ ಮೋದಿಗಿಂತಲೂ ಅಧಿಕ ಮೊತ್ತದ ಹಗರಣ
ವಂಚನೆ ಹೇಗೆ?
- ಸುಳ್ಳು ದಾಖಲೆ, ನಕಲಿ ಲೆಕ್ಕಪತ್ರ ತೋರಿಸಿ ಸಾಲ
- ಕಂಪನಿಯ ಬ್ಯಾಲೆನ್ಸ್ ಶೀಟ್ನಲ್ಲಿ ತಪ್ಪು ಲೆಕ್ಕ
- ಷೇರು ಲೆಕ್ಕಾಚಾರದಲ್ಲೂ ಅಕ್ರಮ