ಬೆಂಗಳೂರು: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’ ಚಿತ್ರ ಬಿಡುಗಡೆಯಾದ ಐದನೇ ದಿನವೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ, ಪರರಾಜ್ಯಗಳಲ್ಲಿ, ಹೊರ ದೇಶಗಳಲ್ಲೂ ಸಹ ಚಿತ್ರಕ್ಕೆ ಪ್ರೇಕ್ಷಕರು ಒಳ್ಳೆ ರೆಸ್ಪಾನ್ಸ್ ನೀಡುತ್ತಿದ್ದಾರೆ. ಚಿತ್ರದ ಕಥೆ, ಮೇಕಿಂಗ್, ಹಾಡುಗಳು, ಹಿನ್ನೆಲೆ ಸಂಗೀತ, ಕ್ಯಾಮರಾ ವರ್ಕ್, ನೈಜ ಪಾತ್ರಗಳಲ್ಲಿ ಕಲಾವಿದರ ಅಭಿನಯ… ಹೀಗೆ ಎಲ್ಲ ವಿಷಯಗಳಲ್ಲು ಸಿನಿಮಾ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲೂ ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ನಟಿಸಿರುವ ಭರತ್ ಬೋಪಣ್ಣ ಅಭಿನಯಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಮಾಡೆಲಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಭರತ್, 2016ರಲ್ಲಿ ‘ಗಿರಿಜಾ ಕಲ್ಯಾಣ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಬಳಿಕ ಕೆಲವು ಧಾರಾವಾಹಿಗಳಲ್ಲಿ ನಟಿಸಿ 2020ರಲ್ಲಿ ‘ಡೆಮೋಪೀಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ವಿಜಯಾನಂದ’ ಅವರು ನಟಿಸಿದ ಎರಡನೇ ಚಿತ್ರವಾದರೂ, ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಅಪ್ಪನ ಪ್ರತಿ ಹೆಜ್ಜೆಯಲ್ಲೂ ಜತೆಗೆ ನಿಲ್ಲುತ್ತಾ, ಅವರ ಕನಸನ್ನೇ ತನ್ನ ಕನಸಾಗಿಸಿಕೊಂಡು, ನನಸು ಮಾಡುವ ದಿಟ್ಟ ಯುವಕನ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದಾರೆ.
‘ವಿಜಯಾನಂದ’ಚಿತ್ರಕ್ಕೆ ಮತ್ತು ತಮ್ಮ ಪಾತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ಕುರಿತು ವಿಜಯವಾಣಿ ಜತೆ ಸಂಭ್ರಮ ಹಂಚಿಕೊಂಡ ಭರತ್, ‘ನನಗೆ ಚಿತ್ರದ ಪ್ರಾರಂಭದಿಂದಲೂ ಆನಂದ ಸಂಕೇಶ್ವರ ಸರ್ ಪ್ರತಿಕ್ರಿಯೆ ತುಂಬ ಮುಖ್ಯವಾಗಿತ್ತು. ಸಿನಿಮಾ ನೋಡಿದ ಬಳಿಕ ಅವರು ಪ್ರತಿ ಸನ್ನಿವೇಶದಲ್ಲೂ ಸ್ಕ್ರೀನ್ ಮೇಲೆ ನಿಮ್ಮ ಇರುವಿಕೆ ಎದ್ದು ಕಾಣುತ್ತದೆ, ಚೆನ್ನಾಗಿ ಅಭಿನಯಿಸಿದ್ದೀರಿ ಎಂದು ಕಾಂಪ್ಲಿಮೆಂಟ್ ನೀಡಿದ್ದು ನನಗೆ ತುಂಬ ಖುಷಿ ನೀಡಿತು. ನನ್ನ ಅಮ್ಮ ಕೂಡ ಸಿನಿಮಾ ನೋಡಿ ಖುಷಿಪಟ್ಟರು, ತುಂಬ ಹೆಮ್ಮೆಪಟ್ಟರು. ಬೇರೆ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ಆದರೂ ನನ್ನನ್ನು ಗುರುತು ಹಿಡಿದು ಹಲವರು, ಗಡ್ಡ ಇರಲಿ ಅಥವಾ ‘ವಿಜಯಾನಂದ’ ಚಿತ್ರದ ಕ್ಲೀನ್ ಲುಕ್ನಲ್ಲಿರಲಿ ಚೆನ್ನಾಗಿ ಕಾಣಿಸುತ್ತೀರ ಅಂದರು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಸದ್ಯ ಭರತ್ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಲಾ ಒಂದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಇದೀಗ ‘ವಿಜಯಾನಂದ’ ಚಿತ್ರ ಬಿಡುಗಡೆಯಾಗಿದ್ದು, ಇನ್ನುಮುಂದೆ ಇನ್ನೂ ಹೆಚ್ಚು ಅವಕಾಶಗಳು ಬರುವ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ಭರತ್ ಬೋಪಣ್ಣ.
ವಿಆರ್ಎಲ್ ಕಂಪನಿ ಹೇಗೆ ಬೆಳೆಯಿತು? ವಿಜಯ ಸಂಕೇಶ್ವರ ಅವರು ಈ ಮಟ್ಟಕ್ಕೆ ಏರಲು ಎಷ್ಟೆಲ್ಲಾ ಕಷ್ಟಪಟ್ಟರು ಅನ್ನೋದನ್ನ ಸಿನಿಮಾದಲ್ಲಿ ತುಂಬ ಚೆನ್ನಾಗಿ ತೋರಿಸಿದ್ದಾರೆ. ನಾನು ಇದು ನಾಲ್ಕನೇ ಬಾರಿ ಸಿನಿಮಾ ನೋಡಿದ್ದು. ಪ್ರತಿ ಬಾರಿ ನೋಡಿದಾಗಲೂ ಹೊಸ ಹೊಸ ವಿಷಯ ಕಲಿಯಲು ಸಿಗುತ್ತದೆ. ಇವತ್ತಿನ ಯುವಜನಾಂಗದವರು, ಮುಂದೆ ಏನಾದರೂ ಸಾಧಿಸಬೇಕು ಅನ್ನೋರು ‘ವಿಜಯಾನಂದ’ ಸಿನಿಮಾನ ಮಿಸ್ ಮಾಡದೇ ನೋಡಿ.
| ಮಹಾಂತೇಶ್ ಪ್ರೇಕ್ಷಕ
ಸಿನಿಮಾ ಬಹಳ ಚೆನ್ನಾಗಿದೆ. ಡಾ. ವಿಜಯ ಸಂಕೇಶ್ವರ ಅವರು ಸಾಕಷ್ಟು ಕಷ್ಟಪಟ್ಟು ದೊಡ್ಡ ಮಟ್ಟಕ್ಕೇರಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಎಲ್ಲರೂ ಕುಟುಂಬ ಸಮೇತ ಸಿನಿಮಾ ನೋಡಬಹುದು.
| ಸಂಗಣ್ಣ ನಾಗೂರು ಪ್ರೇಕ್ಷಕ
ಸಿನಿಮಾ ತುಂಬ ಚೆನ್ನಾಗಿದೆ. ಹೊಸಬರಾದರೂ ನಾಯಕ ನಿಹಾಲ್, ನಾಯಕಿ ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ ಚೆನ್ನಾಗಿ ಅಭಿನಯಿಸಿದ್ದಾರೆ.
| ಮಹಮೂದ್ ಪ್ರೇಕ್ಷಕ
ಯುವಸಮೂಹಕ್ಕೆ ವಿಜಯಾನಂದ ಸ್ಪೂರ್ತಿಯ ಚಿಲುಮೆ
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಂಗಳವಾರ (ಡಿ. 13) ‘ವಿಜಯಾನಂದ’ ಚಿತ್ರ ವೀಕ್ಷಿಸಿದರು. ಬಳಿಕ ‘ದೇಶ-ವಿದೇಶಗಳಷ್ಟೇ ಅಲ್ಲ, ಇಡೀ ವಿಶ್ವದಲ್ಲಿನ ಯುವಸಮೂಹಕ್ಕೆ ‘ವಿಜಯಾನಂದ’ ಸಿನಿಮಾ ಸ್ಪೂರ್ತಿಯ ಚಿಲುಮೆಯಾಗಿದೆ. ಯಾವುದೇ ಕ್ಷೇತ್ರವಾಗಲಿ ಬರುವಂತಹ ಸವಾಲುಗಳನ್ನು ಮೆಟ್ಟಿನಿಂತು ಧೈರ್ಯವಾಗಿ ಎದುರಿಸಲು ನವಚೈತನ್ಯ ನೀಡುವಂತಿದೆ. ದಿಟ್ಟ ಹೆಜ್ಜೆ, ಸಮಯ ಪ್ರಜ್ಞೆ, ಗುರಿಯೊಂದಿಗೆ ಮುಂದೆ ಸಾಗಿದರೆ, ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ‘ವಿಜಯಾನಂದ’ ಸಿನಿಮಾ ಉತ್ತಮ ನಿದರ್ಶನವಾಗಿದೆ. ಉದ್ಯಮ ಕ್ಷೇತ್ರದಲ್ಲಿ ಸಾಧಿಸುವ ಛಲ ಇರುವವರಿಗೆ ಅತ್ಯುತ್ತಮ ಮಾದರಿ ಎಂದರೆ ಡಾ. ವಿಜಯ ಸಂಕೇಶ್ವರ ಅವರು ಎಂಬುದನ್ನು ಸುಂದರವಾಗಿ ಕಟ್ಟಿಕೊಡುವಲ್ಲಿ ಚಿತ್ರದ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅವರ ಪಾತ್ರ ನಿರ್ವಹಿಸಿರುವ ನಟನ ಅಭಿನಯವೂ ಉತ್ತಮವಾಗಿ ಮೂಡಿಬಂದಿದೆ. ಸಿನಿಮಾ ಬಿಡುಗಡೆಯಾದಾಗಿನಿಂದ ನೋಡಬೇಕು ಎಂಬ ಕುತೂಹಲ ಹೆಚ್ಚಿತ್ತು. ಅದಕ್ಕಾಗಿ ಬಿಡುವು ಮಾಡಿಕೊಂಡು ವೀಕ್ಷಿಸಿದೆವು. ಇಂದಿನ ದಿನಗಳಲ್ಲಿ ಇಂತಹ ಉತ್ತಮ ಸಿನಿಮಾ ವೀಕ್ಷಿಸುವ ಮೂಲಕ ಯುವಸಮೂಹ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು, ಸಾಯುವುದರೊಳಗೆ ಏನಾದರೂ ಸಾಧಿಸಿ, ದೇಶ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು ಎನಿಸುವಂತಿದೆ. ದಿಗ್ಗಜರು ಒಳಗೊಂಡು ಸಿನಿಮಾದಲ್ಲಿ ನಟಿಸಿರುವ ನವ ಕಲಾವಿದರು, ಪ್ರತಿಯೊಬ್ಬರು ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ. ಸಾಧಕರಾಗಲು ಬಯಸುವ ಪ್ರತಿಯೊಬ್ಬರು ನೋಡಬೇಕಾದ ಸಿನಿಮಾ’ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಬಣ್ಣಿಸಿದರು.
ಮಹಿಳೆಯ ಒಳ ಉಡುಪು, ಸೀರೆ, ಬಿಂದಿ, ಬಳೆ ಧರಿಸಿದ್ದ ಹತ್ತನೇ ತರಗತಿ ಹುಡುಗ ಮನೆಯಲ್ಲಿ ಶವವಾಗಿ ನೇತಾಡುತ್ತಿದ್ದ!
ಇದು ಕಾಮುಕರು ಕಾಲ್ಕೀಳುವಂತೆ ಮಾಡುವ ಪಾದರಕ್ಷೆ; ಆ್ಯಂಟಿ ರೇಪ್ ಚಪ್ಪಲ್ ಕಂಡು ಹಿಡಿದ ವಿದ್ಯಾರ್ಥಿನಿ