ಬೆಂಗಳೂರು: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾನಿರತ ರೈತರು ಬಸ್ ನಿಲ್ದಾಣ ಹಾಗೂ ಅಂಗಡಿ-ಮುಂಗಟ್ಟುಗಳಿಗೆ ನುಗ್ಗಿ ಬಂದ್ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಜನಜೀವನ ಹಾಗೂ ಸಂಚಾರ ಎಂದಿನಂತೆ ಆರಂಭವಾದರೂ 9 ಗಂಟೆ ವೇಳೆಗೆ ಸಂಚಾರ ಸ್ವಲ್ಪ ವಿರಳವಾಗಿದೆ. ಇನ್ನು ರಾಜ್ಯದೆಲ್ಲಡೆ ರೈತರು ಬೀದಿಗಿಳಿದು ರಸ್ತೆ ತಡೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ಭಾರತ್ ಬಂದ್ನಿಂದ ಬಹುತೇಕ ಭಾಗಗಳಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಧಾರವಾಡ ಜ್ಯುಬಿಲಿ ಸರ್ಕಲ್ನಲ್ಲಿ ರೈತರು ಹಾಗೂ ಜಯ ಕರ್ನಾಟಕ ಸಂಘಟನೆಯ ಪ್ರತಿಭಟನಾಕಾರರು ಚಕ್ಕಡಿ ಎಳೆದ ಪ್ರತಿಭಟನೆ ಮಾಡಿದರು. ಚಾಮರಾಜನಗದಲ್ಲೂ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕೊಯಮತ್ತೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ತಡೆದು ಆಕ್ರೋಶ ಹೊರಹಾಕಿದ್ದಾರೆ. ಅಂಗಡಿ ಮುಂಗಟುಗಳನ್ನು ಬಂದ್ ಮಾಡಿಸಿ, ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಹಾ ಪ್ರತಿಭಟನೆ
ಬೆಳಗಾವಿಯಲ್ಲಿ ಬೆಳಗ್ಗೆಯಿಂದ ಪಟ್ಟುಬಿಡದ ರೈತರು ಚಹಾ ಪ್ರತಿಭಟನೆಯ ಬಳಿಕ ಇದೀಗ ಕಲ್ಲು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಮುಂದೆ ತಲೆ ಮೇಲೆ ಕಲ್ಲು ಹೊತ್ತು, ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ಉಡುಪಿಯಲ್ಲಿ ನೋ ಬಂದ್
ಉಡುಪಿಯಲ್ಲಿ ಬಂದ್ ಆಚರಿಸಲು ಸಂಘಟನೆಗಳು ಹಿಂದೇಟು ಹಾಕಿವೆ. ಹೀಗಾಗಿ ಸಹಜವಾಗಿ ವಾಹನಗಳು ಓಡಾಡುತ್ತಿದ್ದು, ಎಂದಿನಂತೆ ಅಂಗಡಿ-ಮುಂಗಟ್ಟುಗಳು ತೆರೆದುಕೊಂಡಿವೆ. ಒತ್ತಾಯ ಪೂರ್ವಕ ಬಂದ್ಗೆ ಅವಕಾಶ ಇಲ್ಲದಿದ್ದರೂ ದಾವಣಗೆರೆಯಲ್ಲಿ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ದಾರೆ. ಬೀದಿಬದಿ ತರಕಾರಿ ಮಾರಾಟವನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದ್ದಾರೆ.
ಇದನ್ನೂ ಓದಿ: ಕೃಷಿಗೆ ಸಿಗಲಿದೆ ಉದ್ಯಮದ ಸ್ವರೂಪ; ಹೊಸ ಕೃಷಿನೀತಿಗೆ ಸರ್ಕಾರ ಸಜ್ಜು
ಪೊಲೀಸರು ರೈತರೊಂದಿಗೆ ವಾಗ್ವಾದ
ಕೊಪ್ಪಳದಲ್ಲಿ ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ರೈತರೊಂದಿಗೆ ವಾಗ್ವಾದಕ್ಕೆ ಇಳಿದರು. ರೈತ ಮುಖಂಡರೊಂದಿಗೆ ದೂರವಾಣಿಯಲ್ಲಿ ಡಿವೈಎಸ್ಪಿ ಮಾತನಾಡಿದ್ದು, ನಮ್ಮ ರೈತರ ಕಷ್ಟ ನಿಮಗೆ ಹೇಳಿ ಮಾಡಬೇಕಾ? ನಮ್ಮನ್ನು ಜೈಲಿಹಾಕಿ, ನೇಣಿಗೇರಿಸಿ ಪರವಾಗಿಲ್ಲ, ಬೇಕಾಂದ್ರೆ ವಿಷ ಕುಡಿಯುವುದಕ್ಕೂ ರೆಡಿ. ನಾವು ರಸ್ತೆ ತಡೆನೂ ಮಾಡ್ತೀವಿ. ನಮ್ಮಹಕ್ಕು ನಾವು ಪ್ರತಿಭಟನೆ ಮಾಡ್ತೀವಿ. ನಮ್ಮನ್ನು ಬಂಧಿಸಿ ಜೈಲಿಗೆ ಹಾಕಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೀಗೆ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರತ್ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಸಂಚಾರ ವ್ಯತ್ಯಯದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಾರ್ಟಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ರಾಜ್ಯವ್ಯಾಪಿ ಬಂದ್ ನಡೆಸಲು ಕರೆ ನೀಡಿದ್ದಾರೆ.
ರೈತರ ಪ್ರತಿಭಟನೆಗಳೊಂದಿಗೆ ಭಾರತ್ ಬಂದ್ ಆರಂಭ: 10 ಗಂಟೆಯ ಬಳಿಕ ಸ್ಪಷ್ಟ ಚಿತ್ರಣ