ಭರಮಸಾಗರ: ಸಾಧನೆಯ ಹಾದಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರ ಸಾಧನೆಗೆ ಬಲ ದೊರೆಯಲಿದೆ ಎಂದು ಶಾಂತಲಾ ಮಹಿಳಾ ಮಂಡಳಿಯ ವೀಣಾ ಶಿವಯೋಗಿ ಹೇಳಿದರು.
ಗ್ರಾಮದ ಚನ್ನಜ್ಜಿ ಸರ್ಕಲ್ ಬಳಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳಾ ದಿನ ಕೇವಲ ದಿನಾಚರಣೆಗೆ ಸೀಮಿತ ಆಗಬಾರದು ಎಂದರು.
ನೋವುಂಡವರು ಹಾಗೂ ಕಷ್ಟದ ಸುಳಿಗೆ ಸಿಕ್ಕವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರು ಇಂತಹ ಕಾರ್ಯಕ್ಕೆ ಕೈ ಜೋಡಿಸಿದರೆ ಮಹಿಳೆ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ತಿಳಿಸಿದರು.
50 ವರ್ಷದಿಂದ ಯಾವ ಫಲಾಪೇಕ್ಷೆ ಇಲ್ಲದೆ ನಿತ್ಯ ಬೆಳಗ್ಗೆ 4 ರಿಂದ ಗ್ರಾಮ ಸ್ವಚ್ಛತೆಯಲ್ಲಿ ತೊಡಗುವ 70 ವರ್ಷ ವಯಸ್ಸಿನ ಕರಿಯಮ್ಮ, ಹೂವು ಮಾರಿ ಜೀವನ ನಡೆಸುವ 65 ವರ್ಷದ ನರಸಮ್ಮ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕವಯತ್ರಿ ನಿರ್ಮಲಾ, ಲತಾ ವೀರೇಶ್, ಮಂಗಳಮ್ಮ, ಅನುಪಮಾ ಗುರುಸಿದ್ದೇಶ್, ಕವಿತಾ, ಕಾವ್ಯಾ ಹಾಗೂ ಹೊಲಿಗೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿದ್ದರು.