ಭದ್ರಾವತಿ: ಹೊಸಮನೆ ಸಂತೆ ಮೈದಾನದ ಬಳಿ ಕದ್ದ ಮೊಬೈಲ್ ಹಂಚಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೂವರ ಮೇಲೆ ದಾಳಿ ನಡೆಸಿರುವ ಸ್ಥಳೀಯ ಪೊಲೀಸರು ಓರ್ವನನ್ನು ಬಂಧಿಸಿ ಆತನಿಂದ 6,68,400 ರೂ ಬೆಲೆಬಾಳುವ ವಿವಿಧ ಕಂಪನಿಯ 55 ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಪ್ರೊಬೆಷನರಿ ಡಿವೈಎಸ್ಪಿ ಗಜಾನನ ಸುತಾರ ಗುರುವಾರ ನಗರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಮೂರು ಜನ ಆರೋಪಿಗಳು ಮೊಬೈಲ್ ಹಂಚಿಕೆ ಮಾಡಿಕೊಳ್ಳುತ್ತಿರುವ ವೇಳೆ ಏಕಾಏಕಿ ದಾಳಿ ನಡೆಸಿದಾಗ ಇಬ್ಬರು ತಪ್ಪಿಸಿಕೊಂಡು ಓರ್ವ ಸಿಕ್ಕಿಬಿದ್ದಿದ್ದಾನೆ. ಅನ್ವರ್ ಕಾಲನಿ ಸಯ್ಯದ್ ಅಲ್ವಿ (25)ಬಂಧಿತ.
ಈತ ತನ್ನ ಸಹಚರರೊಂದಿಗೆ ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಮೊಬೈಲ್ ಕಳ್ಳತನ ನಡೆಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಪಿಎಸ್ಐ ಶಾಂತಲಾ, ಸಿಬ್ಬಂದಿ ಮಂಜುನಾಥ್, ಮೋಹನ್, ರಾಜು, ಕಲ್ಲೇಶ್, ತಿಮ್ಮಯ್ಯ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.