ಶಿವಮೊಗ್ಗ: ಭದ್ರಾವತಿಯಿಂದ 2007ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಹುಬ್ಬಳ್ಳಿಯ ಹೋಟೆಲ್ವೊಂದರಲ್ಲಿ ನನಗೆ ಸೂಚಿಸಿದ್ದರು. ಪಕ್ಷದಿಂದ ಚುನಾವಣೆಗೆ ಬಿಡಿಗಾಸನ್ನೂ ನೀಡಲಿಲ್ಲ. ಅಂದು ನಾನು ಚುನಾವಣೆಯಲ್ಲಿ ಸೋತೆ ಎನ್ನುವುದಕ್ಕಿಂತ ನನ್ನನ್ನೂ ಸೋಲಿಸಿದರು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ದೂರಿದರು.
ಅಂದು ಸಿಎಂ ಆಗಿದ್ದ ಡಿ.ವಿ.ಸದಾನಂದ ಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರೂ ಇದ್ದರು. ಮಂಜಣ್ಣನನ್ನು ಭದ್ರಾವತಿಯಲ್ಲಿ ನಿಲ್ಲಿಸಿ ಬಲಿಪಶು ಮಾಡುವುದು ಬೇಡವೆಂದು ಅಂದು ಈಶ್ವರಪ್ಪ ನನ್ನ ಪರ ಮಾತನಾಡಿದ್ದರು ಎಂದರು.
2009ರಲ್ಲಿ ನನ್ನ ಹೆಸರು ತಪ್ಪಿಸಿ ಎಸ್.ರುದ್ರೇಗೌಡ ಅವರನ್ನು ನಿಲ್ಲಿಸುವುದಾಗಿ ಹೇಳಿದ್ದರು. ಆನಂತರ ಬಿ.ವೈ.ರಾಘವೇಂದ್ರ ಅವರ ಹೆಸರು ಓಡಾಡುವಂತೆ ಮಾಡಿದರು. ಯಡಿಯೂರಪ್ಪ ತನ್ನ ಮಗನನ್ನು ನಿಲ್ಲಿಸಲ್ಲ ಎಂದು ದೇವರಾಣೆ ಮಾಡಿದ್ದರು. ಆದರೆ ನನ್ನ ಮೂಲಕವೇ ರಾಘವೇಂದ್ರ ಅವರ ಹೆಸರು ಘೋಷಣೆ ಮಾಡಿಸಿದರು. ನಾನೇ ಅಂದು ಪಕ್ಷದ ನಾಯಕರನ್ನು ಒಪ್ಪಿಸಿದ್ದೆ ಎಂದರು.