ಮಂಡ್ಯ: ಹೆಣ್ಣು ಮಕ್ಕಳ ಮೇಲಿನ ತಾರತಮ್ಯವನ್ನು ತೊಡೆದು ಹಾಕುವುದರ ಜತೆಗೆ ಜನರಲ್ಲಿ ನಕರಾತ್ಮಕ ಮನೋಭಾವವನ್ನು ಬದಲಾಯಿಸಲು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ಹೇಳಿದರು.
ನಗರದ ಎಸ್.ಬಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಬೇಟಿ ಬಚಾವೋ ಬೇಟಿ ಪಡಾವೋ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯೋಜನೆಯ ಉದ್ದೇಶ ಲಿಂಗಾನುಪಾತದ ಅಂತರವನ್ನು ಕಡಿಮೆ ಮಾಡುವುದು. ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜತೆಗೆ ಅಸಮಾನತೆಯನ್ನು ತೆಗೆದುಹಾಕುವುದಾಗಿದೆ ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ವಿದ್ಯೆಯಿಂದ ನಮ್ಮ ಮನಸ್ಸು ಸಂಸ್ಕಾರಗೊಳ್ಳುತ್ತದೆ. ಜ್ಞಾನದಿಂದ ನಮ್ಮನ್ನು ಶುದ್ಧಿ ಮಾಡಿಕೊಳ್ಳಬಹುದು. ಮಾನಸಿಕ ಕೆಟ್ಟ ಆಲೋಚನೆಗಳಿಂದ ದೂರವಿರಬಹುದು. ಚಿಕ್ಕ ವಯಸ್ಸಿನಲ್ಲಿ ಮಗಳನ್ನು ನೋಡಿಕೊಳ್ಳುವುದು ತಂದೆಯ ಕರ್ತವ್ಯ. ಮದುವೆಯ ನಂತರ ಗಂಡನ ಕರ್ತವ್ಯ. ಮುಪ್ಪಿನಲ್ಲಿ ನೋಡಿಕೊಳ್ಳುವುದು ಮಗನ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಕುಮಾರಸ್ವಾಮಿ, ಯೋಗೇಶ್, ಮಿಕ್ಕೆರೆ ವೆಂಕಟೇಶ್, ಡಾ.ಅನಿಲ್ಕುಮಾರ್, ಮರಿಸ್ವಾಮಿ, ವೇಣುಗೋಪಾಲ್, ವಿಮೋಚನಾ ಸಂಸ್ಥೆಯ ಜನಾರ್ಧನ, ನಂಜಮಣಿ ಇತರರಿದ್ದರು.