ಬೆಂಗಳೂರು: ಸರ್ಕಾರದಿಂದ ಹಾಲಿನ ದರ ಏರಿಕೆ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಹೋಟೆಲ್ ಮಾಲೀಕರು ಬೆಲೆ ಹೆಚ್ಚಳ ಮಾಡಲು ನಿರ್ಧಾರ ಮಾಡಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಈಗಾಗಲೇ ಸಾಲು ಸಾಲು ದರ ಏರಿಕೆಯಿಂದ ಜನರು ಕಂಗಾಲಾಗಿದ್ದು, ಹೊಸ ಸರ್ಕಾರ ಬಂದರೆ ದರ ಏರಿಕೆಗೆ ಕಡಿವಾಣ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗುತ್ತಿದೆ.
ಆಗಸ್ಟ್ 1ರಿಂದ ನಂದಿನ ಹಾಲಿನ ದರ ಏರಿಕೆಯ ಜತೆಗೆ ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯಲ್ಲೂ ಹೆಚ್ಚಳವಾಗಲಿದೆ. ಶೇ. 10 ರಷ್ಟು ದರ ಏರಿಕೆಗೆ ಹೋಟೆಲ್ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೊಸ ದರ ಆಗಸ್ಟ್ 1ರಿಂದ ಅನ್ವಯವಾಗಲಿದೆ.
ಇದನ್ನೂ ಓದಿ: ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ
ಬೆಲೆ ಏರಿಕೆ ಅನಿವಾರ್ಯ
ಈಗಾಗಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದರಿಂದ ಹೋಟೆಲ್ ನಿರ್ವಹಣೆ ಕಷ್ಟವಾಗಿದ್ದು, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಆಗಸ್ಟ್ ಒಂದರಿಂದಲೇ ದರ ಏರಿಕೆ ಮಾಡಲು ತೀರ್ಮಾನಿಲಾಗಿದೆ. ಈಗಾಗಲೇ ದರ ಹೆಚ್ಚಳವಾಗಿರುವ ಹೋಟೆಲ್ಗಳಿಗೆ ಇದು ಅನ್ವಯವಾಗುವುದಿಲ್ಲ. ಗ್ರಾಹಕರಿಗೂ ಹೊರೆಯಾಗದಂತೆ ಕೇವಲ 10 ರಷ್ಟು ಬೆಲೆ ಏರಿಕೆಗೆ ನಿರ್ಧಾರ ಮಾಡಲಿದ್ದೇವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.
ಸರ್ಕಾರ ರಚನೆಯಾದ ಬೆನ್ನಲ್ಲೇ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ಎದುರಾಗಿತ್ತು. ಇದೀಗ ಹಾಲಿನ ದರವು ಏರಿಕೆಯಾಗಲಿದೆ. ಹಾಲು ಒಕ್ಕೂಟಗಳ ಜತೆ ನಡೆದ ಸಭೆಯ ಬಳಿಕ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ಹೋಟೆಲ್ ತಿಂಡಿ-ತಿನಿಸುಗಳ ದರವೂ ಏರಿಕೆಯಾಗಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಹಾಲಿನ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಇದರ ಬೆನ್ನಲ್ಲೇ ಹೋಟೆಲ್ ಬಿಲ್ ದರವು ಹೆಚ್ಚಾಗಲಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. (ದಿಗ್ವಿಜಯ ನ್ಯೂಸ್)
ಸಹಕಾರಕ್ಕೆ ಸುಧಾರಣೆ ಸ್ಪರ್ಶ: ಐತಿಹಾಸಿಕ ತಿದ್ದುಪಡಿ ಮಸೂದೆ ಮಂಡಿಸಿದ ಸಚಿವ ಅಮಿತ್ ಷಾ
ಒಂದು ಸಣ್ಣ ತಪ್ಪಿನಿಂದ ಪ್ರಾಣವನ್ನೇ ಕಳ್ಕೊಂಡ ವಿದ್ಯಾರ್ಥಿನಿ: ಚಿಕ್ಕ ಸುಳಿವು ಸಿಕ್ಕಿದ್ದರೂ ಉಳಿಯುತ್ತಿತ್ತು ಜೀವ