ಬೆಂಗಳೂರು: ತಾನು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಅಣ್ಣನ ಮಗಳು ಅಂತ ಹೇಳಿ ಹಲವಾರು ಜನರಿಗೆ ಲಕ್ಷಾಂತರ ರೂ. ಟೋಪಿ ಹಾಕಿರುವ ಪಲ್ಲವಿ ಎಂಬಾಕೆಯ ಮೋಡಸ್ ಆಪರಾಂಡಿ (ಕಾರ್ಯವಿಧಾನ) ಹೇಗಿತ್ತು ಎಂಬ ಕುರಿತು ಕುತೂಹಲಕರ ವಿಷಯಗಳು ಹೊರಬೀಳತೊಡಗಿವೆ. ಈಕೆ ಹೇಗೆ ಮಿಕಗಳನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಿದ್ದಳು, ಅವರಿಂದ ಹೇಗೆ ಹಣ ವಸೂಲಿ ಮಾಡುತ್ತಿದ್ದಳು, ಈವರೆಗೆ ಯಾರ್ಯಾರಿಗೆ ಎಷ್ಟೆಷ್ಟು ವಂಚನೆ ಮಾಡಿದ್ದಾಳೆ ಎಂಬುದರ ಸಂಪೂರ್ಣ ವಿವರವನ್ನು ವಕೀಲರೊಬ್ಬರು ವಿವರಿಸಿದ್ದಾರೆ ಮುಂದೆ ಓದಿ…
ಪಲ್ಲವಿ ಬೇಕಾದಷ್ಟು ಜನಕ್ಕೆ ಮೋಸ ಮಾಡಿದ್ದಾಳೆ. ಆನಂದ್ ಮೂರ್ತಿ, ಸುಜಾತಾ, ರಾಜೇಶ್ವರಿ ಎಂಬುವರು ದೂರು ನೀಡಿದ್ದಾರೆ. ಗೌರಮ್ಮ (13 ಲಕ್ಷ ರೂ.), ಸುನಿತಾ (22 ಲಕ್ಷ ರೂ.) ಮಂಜುಳ (50 ಸಾವಿರ ರೂ.), ನಟರಾಜ್ (9 ಲಕ್ಷ ರೂ.), ಯೋಗೇಶ್ (5 ಲಕ್ಷ ರೂ.) ಹಾಗೂ ನಾಗರಾಜು, ಕೆಂಪರಾಜು, ಗುರುಸಿದ್ದಯ್ಯ ಮತ್ತು ಆನಂದ್ ಸೇರಿದಂತೆ ಅನೇಕರಿಗೆ ಲಕ್ಷಾಂತರ ರೂಪಾಯಿಯನ್ನು ಫ್ರಾಡ್ ಪಲ್ಲವಿ ವಂಚನೆ ಮಾಡಿದ್ದಾಳೆಂದು ವಕೀಲರು ಮಾಹಿತಿ ನೀಡಿದ್ದಾರೆ.
ಇನ್ನು ಪಲ್ಲವಿ ಕಾರ್ಯವಿಧಾನ ಹೇಗಿರುತ್ತದೆ ಅಂತಾ ವಕೀಲರು ವಿವರಿಸಿದ್ದಾರೆ. ತಾನು ಬಲೆಗೆ ಕೆಡವಲು ಗುರುತಿಸಿದ ವ್ಯಕ್ತಿಯ ಬಳಿ ಮೊದಲು ಒಂದು ಕಾರನ್ನು ಬಾಡಿಗೆಗೆ ಕೇಳ್ತಾಳಂತೆ. ನಾನು ಡಿಸಿಎಂ ಪರಮೇಶ್ವರ್ ಅವರ ಅಣ್ಣನ ಮಗಳು. ನನಗೆ ವಿಧಾನಸೌಧದಲ್ಲಿ ಎಲ್ಲರ ಪರಿಚಯವಿದೆ. ನನಗಾಗಿ ಏನು ಬೇಕಾದರೂ ಕೆಲಸ ಮಾಡಿಕೊಡುತ್ತಾರೆ. ನಿಮ್ಮಗಳ ಕೆಲಸವನ್ನು ಸುಲಭವಾಗಿ ಮಾಡಿಕೊಡುತ್ತೇನೆಂದು ಬಣ್ಣದ ಮಾತುಗಳಿಂದ ನಂಬಿಸಿ, ಅವರಿಂದ ಒಂದು ಕಾರನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾಳೆ. ಬಳಿಕ ಸುಮಾರು ಒಂದರಿಂದ ಎರಡು ತಿಂಗಳವರೆಗೆ ಅವರ ಡೀಸೆಲ್ನಲ್ಲೇ ಕಾರನ್ನು ಉಪಯೋಗಿಸುತ್ತಾಳೆ. ಈ ಸಮಯದಲ್ಲಿ ಅವರನ್ನು ತುಂಬಾ ಪರಿಚಯ ಮಾಡಿಕೊಳ್ಳುತ್ತಾಳೆ. ಅಲ್ಲದೆ, ಗೊತ್ತಿಲ್ಲದ ಹಾಗೇ ಕೆಲವು ವಿಡಿಯೋಗಳನ್ನು ಸಹ ಮಾಡಿಕೊಳ್ಳುತ್ತಾಳೆ. ಕೊನೆಯಲ್ಲಿ ಕಾರಿನ ಬಾಡಿಗೆ ಏನಾದರೂ ಕೇಳಿದರೆ ನನ್ನ ಬಳಿ ನಿಮ್ಮ ಕೆಲವು ವಿಡಿಯೋಗಳಿವೆ ನಿಮ್ಮ ಮೇಲೆ ಅತ್ಯಾಚಾರ ಕೇಸ್ ದಾಖಲಿಸುತ್ತೇನೆಂದು ಬೆದರಿಸುತ್ತಾಳೆ. ಅಲ್ಲದೆ, ನಾನು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದವಳು ಎನ್ನುವ ಮೂಲಕ ಕಾನೂನಿ ದುರುಪಯೋಗ ಸಹ ಮಾಡಿಕೊಂಡು ಹೆಚ್ಚು ಬಾಡಿಗೆ ಡಿಮ್ಯಾಂಡ್ ಮಾಡುವ ವ್ಯಕ್ತಿಯ ವಿರುದ್ಧ ರೇಪ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದೇ ಈಕೆಯ ದುಷ್ಕೃತ್ಯವಾಗಿದೆ ಎಂದು ವಕೀಲರು ಹೇಳಿದ್ದಾರೆ.
ಫ್ರಾಡ್ ಪಲ್ಲವಿ ಮಾಡುವ ಮೊದಲ ಕೆಲಸವೆಂದರೆ ಜನರನ್ನು ಮರಳು ಮಾಡುವುದು. ನನಗೆ ಜಿ.ಪರಮೇಶ್ವರ್ ಚಿಕ್ಕಪ್ಪ ಆಗಬೇಕು. ನನಗೆ ರಾಜಕೀಯ ಲಿಂಕ್ ಇದೆ. ವಿಧಾನಸೌಧದಲ್ಲಿ ಸುಲಭವಾಗಿ ಕೆಲಸ ಆಗುತ್ತದೆ ಎಂದು ನಂಬಿಸಿ, ವಂಚಿಸುತ್ತಾಳೆ. ಯಾರು ಆಕೆಗೆ ವಿರುದ್ಧವಾಗಿ ಹೋಗುತ್ತಾರೋ ಅವರ ವಿರುದ್ಧ ಸುಳ್ಳು ರೇಪ್ ಕೇಸ್ ಹಾಕುತ್ತಾಳೆ. ಇದರ ಬಗ್ಗೆ ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.
ಜನರ ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ವಂಚಕಿ ಪಲ್ಲವಿ, ಬಾಡಿಗೆಯನ್ನೇ ಕಟ್ಟುವುದಿಲ್ಲ. ಬಾಡಿಗೆ ಕೇಳಿದರೆ, ಸುಳ್ಳು ರೇಪ್ ಕೇಸ್ ಹಾಕುತ್ತಾಳೆ. ಮೊದಲೇ ಮಹಿಳೆಯಾದ್ದರಿಂದ ಪೊಲೀಸರು ಬಹುಬೇಗನೇ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಒಂದು ವೇಳೆ ಪ್ರಕರಣ ದಾಖಲಿಸಿದಿದ್ರೆ ನಮ್ಮ ಮೇಲೆಯೂ ಆರೋಪ ಮಾಡಬಹುದೇನೋ ಎಂಬ ಭಯದಿಂದ ದೂರು ದಾಖಲಿಸಿಕೊಳ್ಳುತ್ತಾರೆ. ಆದರೆ, ಆರೋಪಿ ಬಂಧನದ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಅಮಾಯಕ ಜನರಿಗೆ ಈಕೆಯಿಂದಲೇ ಅನ್ಯಾಯ ಆಗಿರುವುದು ಬೆಳಕಿಗೆ ಬರುತ್ತದೆ. ಬಳಿಕ ಪಲ್ಲವಿ ವಿರುದ್ಧವೇ ಇದೀಗ ಸಾಕಷ್ಟು ದೂರುಗಳು ದಾಖಲಾಗಿವೆ. ಹೀಗಾಗಿ ಈಕೆಯ ಬಗ್ಗೆ ಸಾರ್ವಜನಿಕರು ತುಂಬಾ ಎಚ್ಚರಿಕೆಯಿಂದಿರಬೇಕೆಂದು ವಕೀಲರು ಮನವಿ ಮಾಡಿದರು. (ದಿಗ್ವಿಜಯ ನ್ಯೂಸ್)
ಬೇಗ ಕ್ರಮ ಕೈಗೊಳ್ಳದಿದ್ರೆ ಇನ್ನೆಷ್ಟು ಜನ್ರ ಬಾಳು ಹಾಳು ಮಾಡ್ತಾಳೋ?! ಬೆಚ್ಚಿಬೀಳಿಸುತ್ತೆ ಈಕೆಯ ಹಿಸ್ಟರಿ
VIDEO | ಸಿಬ್ಬಂದಿ ಜತೆ ಚೆಲ್ಲಾಟ: ವೈದ್ಯಾಧಿಕಾರಿಯ ಕಾಮಪುರಾಣದ ಫೋಟೋಗಳು ವೈರಲ್!