ಬಳ್ಳಾರಿ: ಬೇಸಿಗೆಯಲ್ಲಿ ಕಾಲುವೆಗಳಿಗೆ ನೀರು ಹರಿಸುತ್ತಾರೋ ಇಲ್ಲವೊ ಎಂಬ ಆತಂಕದಲ್ಲಿ ರೈತರಿದ್ದಾರೆ. ಹೀಗಾಗಿ, ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸುವ ಕುರಿತು ತೀರ್ಮಾನ ಮಾಡಿ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಇತ್ತೀಚೆಗೆ ತಾಲೂಕಿನ ಮೋಕಾ ಬಳಿಯ ಬಿ.ಡಿ.ಹಳ್ಳಿ ವ್ಯಾಪ್ತಿಯ ಎಲ್ಎಲ್ ಕಾಲುವೆಯ ಸೇತುವೆ ದುರಸ್ತಿ ಮಾಡಲಾಗಿದೆ ಇದರಿಂದ 20 ದಿನಗಳ ಕಾಲ ಕಾಲುವೆಗೆ ನೀರು ಹರಿಯದೆ ರೈತರ ಬೆಳೆಗಳು ಹಾನಿಯಾಗಿದೆ. ಆದ್ದರಿಂದ ರೈತರು ನೀರು ಬಿಡುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಎಲ್ಎಲ್ ಕಾಲುವೆಯಲ್ಲಿ ಆಂಧ್ರ ಮತ್ತು ಕರ್ನಾಟಕದ ಪಾಲಿನ 200 ಕ್ಯೂಸೆಕ್ ನೀರನ್ನು ಜ.1 ರಿಂದ ಏ.10 ರವರೆಗೆ ನೀರು ಹರಿಸಬೇಕು. ಎಚ್ಎಲ್ ಕಾಲುವೆಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ಈ ಮೂರು ತಿಂಗಳಲ್ಲಿ ಹತ್ತು ದಿನ ನೀರು ಸ್ಥಗಿತಗೊಳಿಸಿ, 20 ದಿನ ನೀರು ಹರಿಸಬೇಕು. ಆಗ ರೈತರು ಮೆಕ್ಕ್ಕೆಜೋಳ, ಗೋವಿನ ಜೋಳ, ಸಜ್ಜೆ, ನವಣೆ ಹಾಗೂ ಇತರೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಎರಡನೆ ಬೆಳೆಗೆ ಜಲಾಶಯದಿಂದ ನೀರು ಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ನೀರಾವರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಬೇಡಿಕೆ ಈಡೇರಿಸದಿದ್ದರೆ ಅವರನ್ನು ಹೊರಗಡೆ ಹೋಗದಂತೆ ತಡೆಯಲಾಗುವುದು ಎಂದು ಎಚ್ಚರಿಸಿದರು.
ಇತ್ತೀಚೆಗೆ ಕಾಲುವೆ ದುರಸ್ತಿ ವೇಳೆ ಕೇವಲ ಅಧಿಕಾರಿಗಳು ಮಾತ್ರವಲ್ಲದೆ ರೈತರೂ ಬೆಂಬಲ ನೀಡಿದ್ದರಿಂದ ದುರಸ್ತಿ ಕಾರ್ಯ ವೇಗ ಪಡೆಯಿತು ಎಂದರು. ಮುಖಂಡರಾದ ಜಾಲಿಹಾಳ್ ಶ್ರೀಧರ, ರಂಜನ್ಸಾಬ್, ವೀರಭದ್ರಪ್ಪ, ದೊಡ್ಡಬಸವನಗೌಡ, ವೀರನಗೌಡ, ಬಸವರಾಜ್, ಶೇಕ್ಷ್ಷಾವಲಿ ಇತರರಿದ್ದರು.