ಬಳ್ಳಾರಿ: ವಿದ್ವಾಂಸ ವೈ.ನಾಗೇಶ ಶಾಸ್ತ್ರಿ ಮತ್ತು ಡಾ.ಮಲ್ಲಿಕಾರ್ಜುನಗೌಡರು ಗುರು ಶಿಷ್ಯ ಪರಂಪರೆಗೆ ಆದರ್ಶಪ್ರಾಯ ಎಂದು ಸಾಹಿತಿ ಮೃತ್ಯುಂಜಯ ರುಮಾಲೆ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ವೈ.ನಾಗೇಶ ಶಾಸಿ ಸಾಹಿತ್ಯ ಸಂಘದಿಂದ ಭಾನುವಾರ ಆಯೋಜಿಸಿದ್ದ ಸರ್ವದರ್ಶನ ತೀರ್ಥ ವೈ.ನಾಗೇಶ ಶಾಸಿಗಳ ಸಾಹಿತ್ಯಾವಲೋಕನ ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಮಲ್ಲಿಕಾರ್ಜುನಗೌಡರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಗೇಶ ಶಾಸ್ತ್ರಿಗಳು 19ನೇ ಶತಮಾನದಲ್ಲಿ ಮಹಾನ್ ಲೇಖಕರಾಗಿದ್ದರು. ಅವರು ಸಾಹಿತ್ಯ ರಚಿಸದಿದ್ದರೆ ಕರ್ನಾಟಕ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗುತಿತ್ತು. ಈ ಭಾಗದ ಕನ್ನಡ ಬೆಳವಣಿಗೆಗೆ ಶ್ರಮಿಸಿದರು. ನಾಲ್ಕನೇ ತರಗತಿ ಓದಿ ಸರ್ವದರ್ಶನ ತೀರ್ಥ ಎಂಬ ಬಿರುದು ಪಡೆದದ್ದು, ಸಾಮಾನ್ಯವಲ್ಲ. ಅದರಂತೆ, ಸಂಘದ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನಗೌಡರು ಕೂಡ ಪೂರ್ಣಪ್ರಮಾಣದಲ್ಲಿ ತಮ್ಮ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವಕ್ಕೆ ಕಾರಣರಾದ ಪ್ರಮುಖರಲ್ಲಿ ವೈ.ನಾಗೇಶ್ ಶಾಸಿ ಒಬ್ಬರು. ಅವರಿಲ್ಲದಿದ್ದರೆ ಇಂದು ಬಳ್ಳಾರಿ ಆಂಧ್ರ ಪಾಲಾಗುತ್ತಿತ್ತು. ಕನ್ನಡದ ರಾಜಮನೆತನಗಳು ಅವರನ್ನು ಆಹ್ವಾನಿಸುತ್ತಿದ್ದವು ಎಂದರೆ ಅವರ ಪಾಂಡಿತ್ಯ ಅಮೋಘವಾದುದು ಎಂದರು.
ಕನ್ನಡ ವಿವಿ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಮಾತನಾಡಿದರು. ಸಂಡೂರಿನ ವಿರಕ್ತ ಮಠದ ಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ಗೌಡರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರಮೇಶ್ಗೌಡ ಪಾಟೀಲ್, ಸಿದ್ದನಗೌಡ, ಎಚ್.ಎಂ.ಉಮಾ, ಪುರುಷೋತ್ತಮ್ ಹಂದ್ಯಾಳ್, ಮಧುಮತಿ ಪಾಟೀಲ್, ಕೆ.ಬಿ.ಸಿದ್ದಲಿಂಗಪ್ಪ, ಸತ್ಯಮೂರ್ತಿ, ಸಂಪಿಗೆ ನಾಗರಾಜ್ ಇತರರಿದ್ದರು.