ಬಳ್ಳಾರಿ: ನಗರಸಭೆ ಸದಸ್ಯೆ ಜಿ.ಪದ್ಮಾವತಿ ಯಾದವ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಅವರ ಸಹೋದರ ಸುಬ್ಬಾರಾಯುಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2010ರಲ್ಲಿ ಬಳ್ಳಾರಿಯಲ್ಲಿ ನಗರಸಭೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಆಗಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಡಿ.1ರಂದು ಸಿಎಂ ಹಾಗೂ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶಾಸಕ ಸೋಮಶೇಖರ ರೆಡ್ಡಿಗೆ ಸಂಕಷ್ಟ ಎದುರಾಗಿದೆ.
12 ವರ್ಷದಿಂದ ಕಾನೂನು ಹೋರಾಟ ಮಾಡುತ್ತಿರುವ ಪದ್ಮಾವತಿ ಸಹೋದರ. ಪತ್ರದಲ್ಲಿ ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಕರಣದ ತನಿಖೆಯಲ್ಲಿ ತಮ್ಮ ಹೇಳಿಕೆ ಪಡೆಯದೆ ಸಿಐಡಿಯಿಂದ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
2010ರಲ್ಲಿ ಸಿಐಡಿಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಆದರೆ ಈವರೆಗೆ ತನಿಖೆ ನಡೆಯದೆ ವಿಳಂಬ ಮಾಡಲಾಗಿದೆ. ಹಾಗಾಗಿ 2018ರಲ್ಲಿ ಹೈಕೋರ್ಟ್ನ ಮೊರೆ ಹೋಗಿದ್ದರು. ಧಾರವಾಡದ ಜಿಪಂ ಸದಸ್ಯ ಯೋಗೇಶ್ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದಂತೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ತಮಗೆ ಪ್ರಾಣಹಾನಿಯಾದರೆ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಬ್ಬರಾಯಡು ಬ್ಲಾಕ್ ಮೇಲರ್: ಕಾರ್ಪೋಟರ್ ಪದ್ಮಾವತಿ ಕೊಲೆ ಪ್ರಕರಣ ರೆಡ್ಡಿ ಸಹೋದರರ ವಿರುದ್ಧ ದೂರು ಹಿನ್ನೆಲೆ ಸುದ್ದಿಗಾರರೊಂದಿಗೆ ಶನಿವಾರ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ್ ರೆಡ್ಡಿ, ಸುಬ್ಬರಾಯಡು ಒಬ್ಬ ಬ್ಲಾಕ್ ಮೇಲರ್, ಹಣಕ್ಕೆ ಬೇಡಿಕೆ ಇಡೋದೆ ಅವನ ಕೆಲಸ, ಅವನು ನಮಗೆ ಏನು ಸಂಬಂಧ ?. ಏನು ಕೊಲೆಯಾಗಿದೆ? ಯಾಕೆ ಆಗಿದೆ ? ಅದೆಲ್ಲವೂ ತನಿಖೆ ಆಗಿದೆ. ರಿಪೋರ್ಟ್ ಆಗಿದೆ. ರೊಕ್ಕ ಕೇಳ್ತಾನೆ ಕೊಡದೇ ಇದ್ರೆ ಹೀಗೆ ಮಾಡ್ತಾರೆ ಎಂದು ಆರೋಪಿಸಿದರು. ಪದ್ಮಾವತಿ ಮಕ್ಕಳಿಗೆ ದ್ರೋಹ ಮಾಡಲು ಯತ್ನಿಸಿದ ಅದಕ್ಕೆ ಅವಕಾಶ ಸಿಗಲಿಲ್ಲ. ಆಕೆ ಪಾರ್ಟಿಗಾಗಿ ದುಡಿದಿದ್ದಾರೆ. ಆಕೆ ಬಗ್ಗೆ ನಾವೇನು ಮಾಡೋದು?. ಹನುಮಾನ್ ದೇವರು ನಮ್ಮನ್ನು ಕಾಪಾಡ್ತಾನೆ ಎಂದರು.
ನನ್ನ ಸಹೋದರಿ ಪದ್ಮಾವತಿ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ನ್ಯಾಯ ಒದಗಿಸುವಂತೆ ಎರಡು ವರ್ಷದ ಹಿಂದೆ 2020 ಡಿ.10 ರಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಮತ್ತೆ ಪತ್ರ ಬರೆದಿದ್ದೇನೆ.
| ಎ.ಸುಬ್ಬಾರಾಯುಡು, ದೂರುದಾರ, ಪದ್ಮಾವತಿ ಯಾದವ್ ಸಹೋದರ