ಬಳ್ಳಾರಿ: ಜಿಲ್ಲೆಯ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ದೆಹಲಿಗೆ ತೆರಳಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ಕೇಂದ್ರ ಸಚಿವರುಗಳನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಹತ್ತು ವರ್ಷಗಳ ಹಿಂದೆ ನಗರದ ಸುತಲಿನ ಸಾವಿರಾರು ಎಕರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ಇದುವರೆಗೂ ಕೈಗಾರಿಕೆಯೂ ಸ್ಥಾಪನೆಯಾಗಿಲ್ಲ. ಬದಲಾಗಿ ರೈತರು ಬೆಳೆಯನ್ನು ಬೆಳೆಯಲು ಅವಕಾಶವೂ ದೊರೆಯಲಿಲ್ಲ. ಹೀಗಾಗಿ ಕೂಡಲೇ ಕೈಗಾರಿಕೆ ಸ್ಥಾಪನೆ ಮಾಡಿ ಇಲ್ಲವಾದರೆ ಭೂಮಿಯನ್ನು ರೈತರಿಗೆ ವಾಪಸ್ ಕೊಡಿ ಎಂದು ಕೇಂದ್ರ ಸಚಿವ ಪಿಯುಷ್ ಗೋಯಲ್ಗೆ ಮನವಿ ಸಲ್ಲಿಸಿದ್ದಾರೆ.
ಅದರಂತೆ, ವಿಮಾನ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಕೂಡಲೇ ಕಾಮಗಾರಿಗೆ ವೇಗ ಹೆಚ್ಚಿಸಿ ನಗರಕ್ಕೆ ವಿಮಾನಯಾನ ಸೇವೆ ಆರಂಭಿಸುವಂತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಅಂಕೋಲ-ಗುತ್ತಿ ವಯಾ ಹೊಸಪೇಟೆ ಬಳ್ಳಾರಿ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಚಿವ ನಿತಿನ್ಗಡ್ಕರಿಗೆ ಒತ್ತಾಯಿಸಿದ್ದಾರೆ.
ಇನ್ನು ಬಳ್ಳಾರಿ, ಸಿರಗುಪ್ಪ-ಸಿಂಧನೂರು ರೈಲ್ವೆ ಮಾರ್ಗವು 2015ರ ಕೇಂದ್ರದ ಆಯವ್ಯಯದಲ್ಲಿ ಅನುಮೋದನೆಗೊಂಡಿದ್ದು, ಪ್ರಸ್ತುತ ಕೇಂದ್ರೀಯ ರೈಲ್ವೆ ಬೋರ್ಡ್ನಲ್ಲಿ ನನೆಗುದಿಗೆ ಬಿದ್ದಿದೆ. ಕೂಡಲೇ ಈ ವಿಷಯವನ್ನು ಪರಾಮರ್ಶಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿಬೇಕೆಂದು ಒತ್ತಾಯಿಸಿ ಸಚಿವ ಅಶ್ವಿನಿ ವೈಶ್ಣವ್ಗೆ ಹಾಗೂ ಗಾರ್ಮೆಂಟ್ಸ್, ಪಾದರಕ್ಷೆಗಳು ಮತ್ತು ಗೋಣಿ ಚೀಲದ ಮೇಲೆ ಶೇ.12ಕ್ಕೆ ಜಿಎಸ್ಟಿ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಪತ್ರಿಕೆ ವತ್ತು ಮಾಧ್ಯಮದ ಚೇರ್ಮನ್ ಶ್ರೀನಿವಾಸ್ರಾವ್, ಸದಸ್ಯತ್ವ ಅಭಿವೃದ್ಧಿ ಸಮಿತಿಯ ಚೇರ್ಮನ್ ಜೆ.ರಾಜೇಶ್, ವಿಶೇಷ ಆಹ್ವಾನಿತರಾದ ಸಿ.ಎ.ಕೆ ರಾಜ್ಶೇಖರ್, ಕೆ.ಸಿ.ಹನುಮೇಶ್ ಬಾಬು, ಸಿ.ಪಿ.ರಾಮಕೋಟಿರೆಡ್ಡಿ ಇತರರಿದ್ದರು.