ಬಳ್ಳಾರಿ: ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ವಿವಿಧ ರೈತ ಸಂಘಟನೆ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಯುದ್ಧವೀರ್ ಸಿಂಗ್ ಮತ್ತಿತರ ರೈತ ಮುಖಂಡರ ಮೇಲೆ ಮೋದಿ ಎಂದು ಘೋಷಣೆ ಕೂಗುತ್ತಾ ಸಂಘಟನೆಯ ಪಡೆಯೊಂದು ದಾಳಿ ನಡೆಸಿ, ಮುಖಕ್ಕೆ ಮಸಿ ಬಳಿದು ಉಗ್ರವಾದ ಮೆರೆದಿದೆ. ಇದು ಕೇವಲ ಕೆಲವು ವ್ಯಕ್ತಿಗಳ ಮೇಲೆ ನಡೆದ ದಾಳಿಯಲ್ಲ, ಭಾರತದ ಪ್ರಜಾತಂತ್ರದ ಆಶಯಗಳ ಮೇಲೆ ನಡೆದ ದಾಳಿ. ನೊಂದ, ದಮನಿತ ರೈತ ಸಮುದಾಯದ ಹೋರಾಟದ ಮೇಲೆ ನಡೆದ ಘೋರ ದಾಳಿ ಎಂದು ಪ್ರತಿಭಟನಾಕರಾರು ಆಕ್ರೋಶ ವ್ಯಕ್ತಪಡಿಸಿದರು.
ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಡತನ, ನಿರುದ್ಯೋಗ, ಹಸಿವು ಜನರಿಗೆ ಜೀವನವನ್ನು ನರಕವನ್ನಾಗಿ ಮಾಡಿದೆ. ಇದರ ವಿರುದ್ಧ ನೊಂದ ಜನರು ಭುಗಿಲೇಳುತ್ತಿರುವ ಸಂದರ್ಭದಲ್ಲಿ, ಅವರಲ್ಲಿ ಭೀತಿ ಸೃಷ್ಟಿಸುವಂತಹ ಫ್ಯಾಸಿಸ್ಟ್ ದಾಳಿ ನಡೆದಿದೆ. ಇದರ ವಿರುದ್ಧ ಜನತೆ ಜಾತಿ, ಮತ, ಧರ್ಮಗಳ ಎಲ್ಲೆ ಮೀರಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು. ಘಟನೆಯ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘಟನೆಗಳ ಮುಖಂಡರಾದ ಶಿವಶಂಕರ್, ಸಂಗನಕಲ್ಲು ಕೃಷ್ಣಪ್ಪ, ಗೋವಿಂದ್, ಸತ್ಯಬಾಬು, ಗುರಳ್ಳಿರಾಜ, ಚಂದ್ರಕುಮಾರಿ, ಗಂಗಾಧಾರ ವಡ್ಕರ್, ವಿಜಯ್ಕುಮಾರ್, ಖಾಸಿಂಸಾಬ್, ಪಾಂಡು ಇತರರಿದ್ದರು.