ಹೊಸಪೇಟೆ: ದಾವಣಗೆರೆ-ಹೊಸಪೇಟೆ-ಬಳ್ಳಾರಿ ನಡುವೆ ಬೆಳಗ್ಗೆ ಏಕಕಾಲಕ್ಕೆ ಎರಡೂ ಕಡೆಯಿಂದ ನೂತನ ಪ್ರಯಾಣಿಕರ ರೈಲು ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಸದಸ್ಯರು ಗುರುವಾರ ನಗರದ ರೈಲ್ವೆ ನಿಲ್ದಾಣದ ಕಚೇರಿಗೆ ಭೇಟಿ ನೀಡಿದ್ದ ನವದೆಹಲಿಯ ರೈಲ್ವೆ ಪ್ರಯಾಣಿಕರ ಸೇವಾ ಸಮಿತಿ ಸದಸ್ಯ ಶಿವರಾಜ್ ಕೆ.ಗಾಂಡಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ಜಿಲ್ಲೆ ರಾಜ್ಯದ ಕೇಂದ್ರಸ್ಥಾನದಲ್ಲಿದ್ದು, ಪ್ರತಿನಿತ್ಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಅಸಂಖ್ಯಾತ ಜನರು ಅಲ್ಲಿಗೆ ಹೋಗುತ್ತಾರೆ. ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಮತ್ತು ಹಡಗಲಿ ತಾಲೂಕುಗಳಿಂದ ಸರ್ಕಾರಿ ಕಚೇರಿ ಕೆಲಸದ ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ. ಆದ್ದರಿಂದ ದಾವಣಗೆರೆ ಹಾಗೂ ಬಳ್ಳಾರಿ ನಡುವೆ ನೂತನ ರೈಲು ಆರಂಭಿಸಿದರೆ ಅನುಕೂಲವಾಗುತ್ತದೆ. ಪ್ರತಿದಿನ ಬೆಳಗ್ಗೆ ಗದಗಿನಿಂದ 6 ಗಂಟೆಗೆ ನಿರ್ಗಮಿಸಿ 8 ಗಂಟೆಗೆ ಹೊಸಪೇಟೆಗೆ ಆಗಮಿಸಿ ನಂತರ ಬಳ್ಳಾರಿ ತಲುಪುವಂತೆ ಗದಗ-ಬಳ್ಳಾರಿ ನಡುವೆ ಮುಂಜಾನೆ ರೈಲು ಆರಂಭಿಸಬೇಕು. ಮುಂಬೈ -ಗದಗ ಗಾಡಿ ಸಂಖ್ಯೆ 01139/40 ಹಾಗೂ ಸೊಲ್ಲಾಪುರ-ಗದಗ ಗಾಡಿ ಸಂಖ್ಯೆ: 71303/304, ಹೊಸಪೇಟೆ ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ವೈ.ಯಮುನೇಶ್, ಮಹೇಶ್ ಕುಡತಿನಿ, ದೀಪಕ್ ಉಳ್ಳಿ, ಟಿ.ಎಂ.ತಿಪ್ಪೇಸ್ವಾಮಿ, ವಿಶ್ವನಾಥ ಕೌತಾಳ್, ಮೊಹಮ್ಮದ್ ಬಾಷಾ, ಬಿ.ಜಹಾಂಗೀರ್, ಬಿ.ವಿರೂಪಾಕ್ಷಪ್ಪ, ರಾಮಕೃಷ್ಣ ಇದ್ದರು.