ಬಳ್ಳಾರಿ: ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಬಳ್ಳಾರಿ ಪೂರ್ವವಲಯದ ಬಿಇಒ ಸಿದ್ಧಲಿಂಗಮೂರ್ತಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯಶಿಕ್ಷಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿದರು.
ಒಂದರಿಂದ ಆರು ವರ್ಷದವರೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯದ್ದಾದರೆ, 7 ರಿಂದ 18 ವರ್ಷದವೆರೆಗೆ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಮಕ್ಕಳು ಸದೃಢರಾಗುವ ತನಕ ಅವರ ಹಕ್ಕುಗಳ ರಕ್ಷಣೆಗೆ ವಿವಿಧ ಇಲಾಖೆಗಳ ಸಹಕಾರ ಬೇಕು. ಯಾವ ಮಗು ಶಾಲೆಯಲ್ಲಿರುತ್ತದೆಯೋ ಆ ಮಗುವಿಗೆ ರಕ್ಷಣೆ ಇರುತ್ತದೆ. ಆದ್ದರಿಂದ, ಬೆಳೆಯುವ ಹಂತದಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮೀಣವಲ್ಲದೆ ನಗರಗಳಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದನ್ನು ತಡೆಯಬೇಕಾಗಿದ್ದು, ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಬಾಲ್ಯವಿವಾಹ ವಿಷಯ ತಿಳಿದು ಬರುವ ಅಧಿಕಾರಿಗಳಿಗೆ ಮುಖ್ಯಶಿಕ್ಷಕರು ಮಕ್ಕಳ ಜನ್ಮ ದಿನಾಂಕದ ಪ್ರಮಾಣ ಪತ್ರ ನೀಡಿ ಸಹಕರಿಸುವಂತೆ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಾಜನಾಯ್ಕ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಗಂಗಮ್ಮ ಮಾತನಾಡಿದರು. ವಕೀಲೆ ತ್ರಿವೇಣಿ ಪತ್ತಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು ಮಾತನಾಡಿದರು. ಪ್ರಮುಖರಾದ ಚನ್ನಬಸಪ್ಪ, ಈಶ್ವರ್ ರಾವ್, ಡಿ.ಗಂಗಾಧರ್, ಗಣೇಶ್ ಇತರರಿದ್ದರು.