ಫಲಾನುಭವಿಗಳಿಗೆ ಕಾರ್ಡ್ ವಿತರಣೆ
ಬಳ್ಳಾರಿ: ಕಡು ಬಡವರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವ ಸಲುವಾಗಿ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ಸರ್ಕಾರ ನೀಡುತ್ತಿದೆ ಎಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ಸಿರಗುಪ್ಪ ರಸ್ತೆಯ ಹಂವಬಾವಿ ಬಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ಗಳ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿದವರಿಗೆ ಆರೋಗ್ಯದಲ್ಲಿ ಸಮಸ್ಯೆಯಾದರೆ ಈ ಆಯುಷ್ಮಾನ್ ಕಾರ್ಡ್ ಉಪಯೋಗಕ್ಕೆ ಬರುತ್ತದೆ. ಐದು ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸ್ಮಾರ್ಟ್ ಐಟಿ ಎಂಬ ಕಂಪನಿ ಕೇಂದ್ರ ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನ ಮ್ಯಾಕ್ ಕಾರ್ಪೊರೇಟ್ ಎಂಬ ಕಂಪನಿಯೊಂದಿಗೆ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ 50 ಸಾವಿರ ಕಾರ್ಡ್ ವಿತರಣೆ ಮಾಡಲಾಗಿದೆ. ಹಾಗಾಗಿ ಬಳ್ಳಾರಿಯಲ್ಲಿ ಕಡು ಬಡವರಿಗೆ ಉಚಿತವಾಗಿ ಕಾರ್ಡ್ ವಿತರಣೆ ಮಾಡುವ ಸಲುವಾಗಿ ನಗರದ ಪ್ರತಿ ವಾರ್ಡ್ನಲ್ಲಿ ನಮ್ಮ ಪ್ರತಿನಿಧಿಗಳು ಒಂದು ತಾತ್ಕಾಲಿಕ ಕಚೇರಿ ತೆರೆದು ಕಾರ್ಡ್ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 15 ದಿನಗಳಲ್ಲಿ ಎಲ್ಲರಿಗೂ ಕಾರ್ಡ್ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಮುಖಂಡರಾದ ವೀರಶೇಖರ್ ರೆಡ್ಡಿ, ಭೀಮಲಿಂಗ, ಡಾ.ಸಂಗಮ್, ಪರಶುರಾಮ, ಎಂ.ಮುರಳೀಧರ ಯಾದವ್ ಇತರರಿದ್ದರು.