ಬಳ್ಳಾರಿ: ಕೋವಿಡ್ ಸೋಂಕಿನಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರಾಥಮಿಕ (1 ರಿಂದ 5) ಶಾಲೆಗಳ ಭೌತಿಕ ತರಗತಿಗಳು ಸೋಮವಾರ ಆರಂಭವಾಗಿದ್ದು, ಚಿಣ್ಣರ ಆಗಮನದಿಂದ ಶಾಲೆಗಳಿಗೆ ಮತ್ತೆ ಜೀವಕಳೆ ಬಂದಿದೆ.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಶಾಲೆ ಒಳಗೆ ಬಿಡಲಾಯಿತು. ಇನ್ನು ಹಲವು ಕಡೆ ಮಕ್ಕಳಿಗೆ ಹೂಗುಚ್ಚ, ಸಿಹಿ ನೀಡುವ ಮೂಲಕ ಸ್ವಾಗತಿಸಲಾಯಿತು. ಮೊದಲ ದಿನ ಶೇ.50 ರಿಂದ 60 ಮಾತ್ರ ಹಾಜರಾಗಿದ್ದರು. ಗುಗ್ಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಜಿ.ಸೋಮಶೇಖರೆಡ್ಡಿ ಭೇಟಿ ನೀಡಿ, ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಕೋಟೆ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಡಿಡಿಪಿಐ ರಾಮಪ್ಪ ಭೇಟಿ ನೀಡಿ ಮಕ್ಕಳ ಜತೆ ಸಂವಾದ ನಡೆಸಿದರು. ಬಳಿಕ ಮಾತನಾಡಿ, ಎರಡು ವರ್ಷಗಳ ನಂತರ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿರುವುದರಿಂದ ಮೊದಲ ಐದು ದಿನಗಳ ಕಾಲ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಅ.25 ಸೋಮವಾರದಿಂದ ಅ.30 ಶುಕ್ರವಾರದವರೆಗೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 10.30ರ ವರೆಗೆ ನಡೆಯಲಿದೆ. ನವೆಂಬರ್ 1 ಅಥವಾ 2 ರಿಂದ ಪೂರ್ಣ ಪ್ರಮಾಣದಲ್ಲಿ ಬೆಳಗ್ಗೆ 10.30 ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಜತೆಗೆ ಅಕ್ಷರ ದಾಸೋಹ (ಬಿಸಿಯೂಟ) ಯೋಜನೆಯೂ ಆರಂಭವಾಗಲಿದೆ. ಒಂದು ವೇಳೆ ಕೊಠಡಿಗಳ ಕೊರತೆಯುಳ್ಳ ಶಾಲೆಗಳವರು ಬೆಳಗ್ಗೆ 1 ರಿಂದ 3, ಮಧ್ಯಾಹ್ನ 4-5ನೇ ತರಗತಿಗಳಿಗೆ ಬೋಧನೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಶಿಕ್ಷಕರು ನಿತ್ಯ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಸುರಕ್ಷತೆಯನ್ನು ಕಾಪಾಡಬೇಕು. ಯಾವುದೇ ತರಹದ ಲಕ್ಷಣಗಳು ಕಂಡಲ್ಲಿ ಕೂಡಲೇ ವೈದ್ಯರಿಗೆ ತಿಳಿಸಬೇಕು. ಚಿಕ್ಕ ಮಕ್ಕಳು ಆರೋಗ್ಯ ಕಾಪಾಡುವ ಹೊಣೆಗಾರಿಕೆ ಶಿಕ್ಷಕ ವೃಂದ ಹಾಗೂ ಪಾಲಕರಾಗಿದ್ದಾಗಿದೆ.
| ಜಿ.ಸೋಮಶೇಖರೆಡ್ಡಿ ಶಾಸಕ