ಶಿವಮೊಗ್ಗ: ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದರಿಂದ ಸದೃಢ ಆರೋಗ್ಯ ಹೊಂದಬಹುದು. ಒಳ್ಳೆಯ ಆಹಾರ ಸೇವನೆ, ನಿತ್ಯ ವ್ಯಾಯಾಮ ಮಾಡುವುದರಿಂದ ಕ್ರಿಯಾಶೀಲರಾಗಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ವಿಶ್ವ ರೇಬೀಸ್ ದಿನ ಹಾಗೂ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಅವರು, ರೇಬೀಸ್ ಮಾರಣಾಂತಿಕ ಕಾಯಿಲೆ. ರೇಬೀಸ್ ಸೋಂಕಿತ ಪ್ರಾಣಿ ಕಡಿತ, ವಿಶೇಷವಾಗಿ ನಾಯಿ ಕಡಿತದಿಂದ ಹರಡುತ್ತದೆ. ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿ ತಕ್ಷಣ ವೈದ್ಯರಲ್ಲಿಗೆ ತೆರಳಿ ಸೂಕ್ತ ಲಸಿಕೆ ಪಡೆದಲ್ಲಿ ಶೇ.100 ರೇಬೀಸ್ ನಿಯಂತ್ರಣ ಸಾಧ್ಯ ಎಂದರು.
ಡಿಎಚ್ಒ ಡಾ.ರಾಜೇಶ್ ಸುರಗೀಹಳ್ಳಿ ಮಾತನಾಡಿ, ಪ್ರತಿದಿನ 30 ನಿಮಿಷ ಲಘು ವ್ಯಾಯಾಮ, ಸಮತೋಲನ ಆಹಾರ ಸೇವನೆ ಪಾಲಿಸಬೇಕು. ಮದ್ಯಪಾನ, ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ನಾಯಿ ಸಾಕಿರುವವರು ತಪ್ಪದೇ ನಾಯಿಗೆ ರೇಬೀಸ್ ಲಸಿಕೆ ಹಾಕಿಸಬೇಕು. ನಾಯಿ ಅಥವಾ ಇತರ ಪ್ರಾಣಿ ಕಡಿತಕ್ಕೆ ಒಳಗಾಗುವ ಅಪಾಯ ಇರುವವರು ಕಡಿತಕ್ಕೊಳಗಾಗುವ ಮುನ್ನವೇ ರೇಬೀಸ್ ವಿರುದ್ಧದ ಲಸಿಕೆ ಪಡೆದಲ್ಲಿ, ಮುಂದೆಂದಾದರೂ ಪ್ರಾಣಿ ಕಡಿತಕ್ಕೊಳಗಾದಲ್ಲಿ ರೇಬೀಸ್ನಿಂದ ಪಾರಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಒ.ಮಲ್ಲಪ್ಪ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಕೆ.ಕಿರಣ್, ಶಿವಮೊಗ್ಗ ತಾಲೂಕು ವೈದ್ಯಾಧಿಕಾರಿ ಡಾ. ಜಿ.ಬಿ.ಚಂದ್ರಶೇಖರ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಸಾಂಕ್ರಾಮಿಕ ರೋಗ ತಜ್ಞೆ ಡಾ. ದಿವ್ಯಾ, ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಗಿರೀಶ್ ಕಾಮತ್, ಪ್ರಮುಖರಾದ ನರಸಿಂಹಮೂರ್ತಿ, ಹರೀಶ್ ಪಟೇಲ್ ಇತರರಿದ್ದರು.