ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ, ಟೀಮ್ ಇಂಡಿಯಾ ಪಾಲಿಗೆ ಸಿಹಿಸುದ್ದಿ ಸಿಕ್ಕಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಖಚಿತವಾದ ಉತ್ತರ ದೊರೆಯದಿದ್ದರೂ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಬುಮ್ರಾ ನೆಟ್ಸ್ನಲ್ಲಿ ಒಂದೇ ದಿನ ಏಳು ಓವರ್ಗಳ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿ ಅಥವಾ ಏಷ್ಯಾಕಪ್ ಟೂರ್ನಿಗೆ ಬುಮ್ರಾ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಇದು ಟೀಮ್ ಇಂಡಿಯಾ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಗುಡ್ನ್ಯೂಸ್ ಎನಿಸಿದೆ. ವಿಶ್ವಕಪ್ ಆರಂಭಕ್ಕೆ ಇನ್ನೂ 100 ದಿನಗಳು ಮಾತ್ರ ಬಾಕಿ ಉಳಿದಿದೆ.
ಬೆನ್ನು ನೋವಿನ ಶಸಚಿಕಿತ್ಸೆಯ ನಂತರ ನಿರಂತರ ಮೇಲ್ವಿಚಾರಣೆ ಅಗತ್ಯ. ಬುಮ್ರಾ ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದ್ದು, ಎನ್ಸಿಎ ನೆಟ್ಸ್ನಲ್ಲಿ ಏಳು ಓವರ್ಗಳನ್ನು ಬೌಲ್ ಮಾಡಿದ್ದಾರೆ. ಮುಂದಿನ ತಿಂಗಳು (ಎನ್ಸಿಎಯಲ್ಲಿ) ಕೆಲವು ಅಭ್ಯಾಸ ಪಂದ್ಯಗಳನ್ನು ಆಡಿದ ನಂತರ ಅವರ ಫಿಟ್ನೆಸ್ ಪರೀಕ್ಷೆ ನಡೆಯಲಿದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಬುಮ್ರಾ ಅವರು ಆತುರಪಡದೆ ಮೊದಲಿಗೆ ಅಭ್ಯಾಸ ಪಂದ್ಯಗಳನ್ನು ಆಡುವುದು ಉತ್ತಮ ಹೆಜ್ಜೆಯಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ಕಂಡೀಷನಿಂಗ್ ಕೋಚ್ ರಾಮ್ಜಿ ಶ್ರೀನಿವಾಸನ್ ತಿಳಿಸಿದ್ದಾರೆ.
2022ರ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕೊನೇ ಬಾರಿ ಭಾರತ ಪರ ಆಡಿದ್ದ ಬುಮ್ರಾ ಬಳಿಕ ತೀವ್ರ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಬಳಿಕ ಮಾರ್ಚ್ನಲ್ಲಿ ನ್ಯೂಜಿಲೆಂಡ್ಗೆ ತೆರಳಿ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.