ಹಿರೇಕೆರೂರ: ಸಮಾಪನೆಗೊಂಡ ಬಸವೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಹೆಸರಿನಲ್ಲಿರುವ ಪೂರ್ಣ ಹಣವನ್ನು ಷೇರುದಾರರಿಗೆ ವಾಪಸ್ ಕೊಡಿಸಲು ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರ ನಿರ್ದೇಶನದಂತೆ ಶಾಸಕ ಯು.ಬಿ. ಬಣಕಾರ ನೇತೃತ್ವದಲ್ಲಿ ತಾಲೂಕಿನ ವಿವಿಧ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರು ರೈತರ ಹಿತದೃಷ್ಟಿಯಿಂದ ತಾಲೂಕಿನಲ್ಲಿ ಬಸವೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ರೈತರಿಂದ 5.81 ಕೋಟಿ ರೂಪಾಯಿ ಸಂಗ್ರಹಿಸಿದ್ದರು. ಅಲ್ಲದೆ, 126 ಎಕರೆ ಜಮೀನು ಪಡೆದುಕೊಂಡು ಕಾರ್ಖಾನೆ ಸ್ಥಾಪಿಸಲು ಚಾಲನೆ ನೀಡಿದ್ದರು. ಆದರೆ, ರಾಜಕೀಯ ದುರುದ್ದೇಶದಿಂದ ಬಸವೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತವನ್ನು ಸಮಾಪನೆಗೊಳಿಸಲಾಯಿತು. ಈ ಜಮೀನನ್ನು ಜಿ.ಎಂ. ಸಿದ್ಧೇಶ್ವರ ಅವರಿಗೆ ಕಾರ್ಖಾನೆ ಮಾಡಲು ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದೆ. ರೈತರಿಂದ ಸಂಗ್ರಹಿಸಿದ ಷೇರು ಹಣವನ್ನು ಕಾರ್ಖಾನೆಗೆ ಆಡಳಿತ ಮಂಡಳಿ ಖರ್ಚು ಮಾಡದೇ ಬ್ಯಾಂಕ್ಗಳಲ್ಲಿ ಠೇವಣಿ ಮಾಡಿತ್ತು. ಅದರಿಂದ ಬಂದ ಬಡ್ಡಿ ಮತ್ತು ರೈತರ ಷೇರು ಹಣ ಮಾತ್ರ ಕಾರ್ಖಾನೆ ಹೆಸರಿನಲ್ಲಿ ಇರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಖಾನೆಗೆ ಷೇರು ಹಣವನ್ನಾಗಲಿ, ಸಾಲವನ್ನು ನೀಡಿಲ್ಲ. ಈಗಾಗಲೇ ಸಹಕಾರಿ ಸಂಘಗಳ ಎರಡು ಸಾವಿರ ಬೆಲೆಯ ಷೇರುಗಳಿಗೆ 15 ಸಾವಿರ ರೂಪಾಯಿ ನೀಡಲಾಗಿದೆ. ವೈಯುಕ್ತಿಕ ಷೇರುದಾರ ರೈತರಿಗೆ 2 ಸಾವಿರ ಬೆಲೆಯ ಷೇರಿಗೆ 4 ಸಾವಿರ ರೂಪಾಯಿಯಂತೆ ವಾಪಸ್ ನೀಡಲಾಗಿದೆ. ಇನ್ನು ಕಾರ್ಖಾನೆಯ ಹೆಸರಿನಲ್ಲಿ ವಿವಿಧ ಬ್ಯಾಂಕ್ನಲ್ಲಿ ಅಂದಾಜು 2.25 ಕೋಟಿ ರೂಪಾಯಿ ರೈತರ ಷೇರು ಹಣವಿದೆ. ಸಮಾಪನೆ ಅಧಿಕಾರಿಗಳು 15 ರಿಂದ 20 ವರ್ಷವಾದರೂ ರೈತರಿಗೆ ಷೇರಿನ ಹಣ ವಾಪಸ್ ನೀಡಿಲ್ಲ. ಕೂಡಲೆ ಬಾಕಿ ಇರುವ ರೈತರ ಷೇರು ಹಣವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ರಾಜಶೇಖರ ಪಾಟೀಲ, ಅಲ್ಲಾಭಕ್ಷ್ ಅಂತರವಳ್ಳಿ, ಸುರೇಶ ಮಡಿವಾಳರ, ಸುರೇಶ ಸೊರಟೂರ ಹಾಗೂ ರೈತರು ಇದ್ದರು.