More

    ಬಸವ ತತ್ವದ ಆಧಾರದಲ್ಲಿ ಸಂವಿಧಾನ ರಚನೆ: ಸಾಮಾಜಿಕ ಚಿಂತಕ ರಂಜಾನ್ ದರ್ಗಾ ಹೇಳಿಕೆ

    ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಸಮಾಜದ ಪರಿಕಲ್ಪನೆಯ ಬಸವ ತತ್ವದ ಆಧಾರದಲ್ಲೇ ಸಂವಿಧಾನ ರಚಿಸಿದ್ದಾರೆ ಎಂದು ಸಾಮಾಜಿಕ ಚಿಂತಕ ರಂಜಾನ್ ದರ್ಗಾ ಹೇಳಿದರು.
    ನಗರದ ಗಾಂಧಿಭವನದಲ್ಲಿ ಬಸವ ಜಯಂತಿ ಆಚರಣೆ ಅಂಗವಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಬಸವ ತತ್ವ ರಕ್ಷಣೆಯಲ್ಲಿ ಸಂವಿಧಾನ ಕುರಿತ ವಿಚಾರ ಚಿಂತನೆ ಮತ್ತು ಬಸವಶ್ರೀ ಪುರಸ್ಕಾರ’ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ಎಲ್ಲರನ್ನೂ ನಮ್ಮವರೆಂದು ಕಾಣುವ ಸೂತ್ರವನ್ನು ಸಂವಿಧಾನದ ಪೀಠಿಕೆಯಲ್ಲೇ ಇದೆ ಎಂದರು.
    ವಿಶ್ವದಲ್ಲಿ ಎಲ್ಲಿಯೂ ಕಾಣದಂತಹ ಶರಣ ಸಂಕುಲ ನಮ್ಮ ಕನ್ನಡದ ನೆಲದಲ್ಲಿ ಒಂದುಗೂಡಿತ್ತು. 11ನೇ ಶತಮಾನದಲ್ಲಿಯೇ ಎಲ್ಲ ಕಾಯಕವರ್ಗಗಳ 700ಕ್ಕೂ ಹೆಚ್ಚಿನ ಪ್ರತಿನಿಧಿಗಳಿಂದ ಅನುಭವ ಮಂಟಪ ರೂಪುಗೊಂಡಿತ್ತು. ಅದೇ ಮಾದರಿಯಲ್ಲಿಯೇ ಇಂದಿನ ಪಾರ್ಲಿಮೆಂಟ್ ಕೂಡ ಇದೆ. ಆದರೆ ಪ್ರಸ್ತುತ ಬಸವ ತತ್ವವನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಬಸವಣ್ಣನ ಪಾರ್ಲಿಮೆಂಟ್ ಸ್ಥಾಪನೆಯಾಗಬೇಕು. ಬಸವ ತತ್ವ ಮತ್ತು ಅಂಬೇಡ್ಕರ್‌ರ ಸಂವಿಧಾನ ರಕ್ಷಣೆಯಾಗಬೇಕೆಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ ಮಾತನಾಡಿ, ಕಸುಬಿನ ಆಧಾರದಲ್ಲಿ ಜಾತಿ ಮಾಡಲಾಗಿದೆ. ಆದರೆ ಇಂದು ಅದೇ ಜಾತಿಗಳನ್ನು ರಾಜಕೀಯ ಲಾಭಕ್ಕೆ ಬಳಸಲಾಗುತ್ತಿದೆ. ಪರಿಣಾಮ ಜಾತಿ ಮತ, ಧರ್ಮಾಚರಣೆಗಳು ಗಟ್ಟಿಯಾಗಿ ಬೇರೂರುತ್ತಿವೆ. ಇಂದಿನ ಆಧುನಿಕ ದಿನಮಾನಗಳಲ್ಲೂ ಜಾತಿ ಎಂಬುದು ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಮಂಡ್ಯದಲ್ಲಿ ನಡೆದಿರುವ ಮರ್ಯಾದಾ ಹತ್ಯೆಗಳೇ ಸಾಕ್ಷಿ ಎಂದರು.
    ಇಂತಹ ಕಾಲಘಟ್ಟದಲ್ಲಿ ಸಮಾಜವನ್ನು ಸರಿದಾರಿಗೆ ತರಬೇಕಾದ ಮಠಗಳು ಕೂಡ ರಾಜಕಾರಣಕ್ಕೆ ಇಳಿದುಬಿಟ್ಟಿವೆ. ಹಾಗಾಗಿ ಇಲ್ಲಿ ದನಿಕನಿಗೊಂದು ನ್ಯಾಯ, ಬಡವನಿಗೊಂದು ನ್ಯಾಯ ಎಂಬಂತಾಗಿದೆ. ಹಾಗಾಗಿ ನಾವು ಮತ್ತೆ ಹಿಂದಕ್ಕೆ ಹೋಗಿದ್ದೇವಾ?. ಅಥವಾ ಮುಂದಕ್ಕೆ ಕಾಲಿರಿಸಿದ್ದೇವಾ ಎಂಬ ಸಂಶಯ ಕಾಡುತ್ತಿದೆ. ಹಣ ಮತ್ತು ಜಾತಿ ಬಲದ ಮೇಲೆ ರಾಜಕೀಯ ನಿಂತಿದೆ. ಪರಿಣಾಮ ಸಾಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಪ್ರಾಸ್ತಾವಿಕ ನುಡಿಗಳನ್ನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಆಧುನಿಕ ಯುಗದಲ್ಲೂ ಜಾತೀಯತೆ, ಕೋಮುವಾದ, ಮಹಿಳಾ ಶೋಷಣೆ ಮುಂದುವರೆದಿದೆ. ಶೋಷಿತರು ಮತ್ತು ತಬ್ಬಲಿ ಸಮಾಜಗಳು ಉಳಿವಿನ ಹೋರಾಟ ನಡೆಸುತ್ತಿವೆ. ಈ ವ್ಯವಸ್ಥೆಯ ಸುಧಾರಣೆಗೆ ಬಸವ ತತ್ವವೊಂದೇ ಪರಿಹಾರ ಮಾರ್ಗ ಎಂದ ಅವರು, ಬಸವ ತತ್ವದ ಆಶಯದಲ್ಲೇ ರೂಪುಗೊಂಡಿರುವ ಸಂವಿಧಾನ ಸಂರಕ್ಷಣೆಯ ಮೂಲಕ ಆಧುನಿಕ ಅನುಭವ ಮಂಟಪವನ್ನು ಜೀರ್ಣೋದ್ಧಾರ ಮಾಡಬೇಕಿದೆ ಎಂದು ತಿಳಿಸಿದರು.
    ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾಯಕಯೋಗಿ ಪ್ರತಿಷ್ಠಾನದ ಎಂ.ಶಿವಕುಮಾರ್, ಬಾಬುನಾಯಕ್, ಸುರೇಶ್‌ಬಾಬು ಇತರರಿದ್ದರು.
    ಇದೇ ವೇಳೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಕವಿ ಕೆ.ಪಿ.ಮೃತ್ಯುಂಜಯ, ದಸಂಸ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್, ಶ್ರೀರಂಗಪಟ್ಟಣ ತಾಲೂಕು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ನಾಗಮಂಗಲ ಸಾವಿತ್ರಮ್ಮ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ.ಶ್ರೀನಿವಾಸ್, ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಕುಂಬಾರ ಸಮಾಜದ ಹಿರಿಯ ಮುಖಂಡ ಅರಕೆರೆ ದಾಸಪ್ಪ, ಮಡಿವಾಳ ಸಮುದಾಯದ ಮಹಿಳಾ ಮುಖಂಡರಾದ ಅಕ್ಕಿಹೆಬ್ಬಾಳು ಮಣಿಯಮ್ಮ, ಗೊಲ್ಲ ಸಮುದಾಯದ ಹಿರಿಯ ಮುಖಂಡ ಗಿರಿಯಪ್ಪ ಗೊಲ್ಲರದೊಡ್ಡಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಸಾಮಾಜಿಕ ಚಿಂತಕ ರಂಜಾನ್ ದರ್ಗಾ ಅವರಿಗೆ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts