ವಿಜಯಪುರ: ಬಸವನಬಾಗೇವಾಡಿ ವಿಧಾನ ಸಭೆ ಕ್ಷೇತ್ರದ ಬಡಜನರಿಗೆ ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ವಿತರಿಸಲು ಶಾಸಕ ಶಿವಾನಂದ ಪಾಟೀಲ ಮುಂದಾಗಿದ್ದಾರೆ.
ಒಟ್ಟು 20 ಸಾವಿರ ಕಿಟ್ ತಯಾರಿಸಲಾಗಿದ್ದು ಮಂಗಳವಾರ ನಿಡಗುಂದಿಯಿಂದ 1200 ಬಡ ಕುಟುಂಬಗಳಿಗೆ ಹಂಚುವ ಮೂಲಕ ಚಾಲನೆ ನೀಡಲಾಗುವುದೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕರೊನಾ ಹಾವಳಿಗೆ ಜನ ನಲುಗಿದ್ದು, ಬಡವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗುಳೆ ಹೋದವರು ವಾಪಸ್ ಬಂದಿದ್ದು, ಆಹಾರ ಮತ್ತು ಉದ್ಯೋಗವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ 17 ಕೆಜಿ ತೂಕದ ಕಿಟ್ ವಿತರಿಸಲಾಗುತ್ತಿದೆ. ಪ್ರತಿ ಕಿಟ್ನಲ್ಲಿ ಜೋಳ, ತೊಗರಿ ಬೇಳೆ, ರವಾ, ಎಣ್ಣೆ, ಅವಲಕ್ಕಿ, ಖಾರದ ಪುಡಿ, ಈರುಳ್ಳಿ, ಆಲುಗಡ್ಡೆ, ಸಾಬೂನು, ಸಕ್ಕರೆ, ಚಹಾಪುಡಿ, ಉಪ್ಪು ಸೇರಿ 16 ಪದಾರ್ಥಗಳಿರಲಿವೆ. ಈ ಭಾಗದ ಪ್ರಮುಖ ಆಹಾರ ಬೆಳೆಯಾದ ಜೋಳವನ್ನೇ ನೀಡಲಾಗುತ್ತಿದ್ದು ಇದನ್ನು ಜಿಲ್ಲಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆಯಾ ಕ್ಷೇತ್ರದ ಶಾಸಕರು ಕೈಜೋಡಿಸಿದರೆ ಎಲ್ಲರಿಗೂ ಜೋಳ ನೀಡಲು ಅನುಕೂಲವಾಗಿಲಿದೆ. ಇಲ್ಲದಿದ್ದರೂ ಬ್ಯಾಂಕ್ನಿಂದ ಜೋಳ ನೀಡುವ ಭರವಸೆ ನೀಡಿದರು.
ನೈಜ ಸ್ಥಿತಿ ಆಧರಿಸಿ ವಿತರಣೆ
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ನೋಡಿ ಕಿಟ್ಗಳನ್ನು ಹಂಚುತ್ತಿಲ್ಲ. ನೈಜ ಸ್ಥಿತಿ ಆಧರಿಸಿ ಕಿಟ್ಗಳನ್ನು ನೀಡಲಾಗುತ್ತಿದೆ. ವೀರಶೈವ ಮಹಾಸಭಾದ ಸಹಕಾರ ಮತ್ತು ಸ್ನೇಹಿತರಾದ ರಾಮು ಕವಲಗಿ, ಶರಣು ಆಲೂರ ಮತ್ತಿತರರ ಸಹಕಾರವೂ ಇದೆ. ವೀರಶೈವ ಮಹಾಸಭಾದವರು ವಿನೂತನವಾಗಿ ಪ್ಯಾಕಿಂಗ್ ಮಾಡಿಕೊಟ್ಟಿದ್ದಾರೆ. ಈ ಕಿಟ್ಗಳು ಅರ್ಹರಿಗೆ ತಲುಪಬೇಕು. ಶ್ರೀಮಂತರು ಇಂಥ ಸಂದರ್ಭ ಉದಾರತೆ ಮೆರೆಯಬೇಕೆಂದರು.
ಮುಖಂಡರಾದ ಎಂ.ಆರ್. ಪಾಟಿಲ, ಪ್ರಕಾಶ ಪಾಟೀಲ, ರಾಜು ಕಳಸಗೊಂಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
Food Grains Kit