ಬಸವಕಲ್ಯಾಣ: ಸೈಬರ್ ಅಪರಾಧ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದರೂ ಆನ್ಲೈನ್ ವಂಚನೆಗೆ ಒಳಗಾಗುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕಳೆದ ಎರಡ್ಮೂರು ದಿನಗಳಲ್ಲಿ ೪-೫ ಜನರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಮುಗ್ಧರನ್ನೇ ಟಾರ್ಗೆಟ್ ಮಾಡುವ ಆನ್ಲೈನ್ ವಂಚಕರು, ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ, ಆಧಾರ್, ಒಟಿಪಿ ಸೇರಿ ಇತರ ಮಾಹಿತಿ ಪಡೆದು ವಂಚಿಸುತ್ತಾರೆ. ಆದರೆ ಇದಾವುದೇ ಮಾಹಿತಿ ಕೇಳದೆ ಈಗ ಆನ್ಲೈನ್ ಮೂಲಕ ಹಣ ಡ್ರಾ ಮಾಡಿಕೊಂಡು ವಂಚಿಸಿದ ಎರಡು ಪ್ರಕರಣ ಬೆಳಕಿಗೆ ಬಂದಿವೆ.
ತ್ರಿಪುರಾಂತ ನಿವಾಸಿ, ನ್ಯಾಯವಾದಿ ಮನೋಜಕುಮಾರ ಮುಡಬಿಕರ್ ಅವರ ಬ್ಯಾಂಕ್ ಖಾತೆಯಿಂದ ಅವರಿಗೆ ಗೊತ್ತಿಲ್ಲದೇ ೨೧ ಸಾವಿರ ರೂ. ಡ್ರಾ ಆಗಿದೆ. ಕೆನರಾ ಬ್ಯಾಂಕ್ ಖಾತೆಯಿಂದ ಮೇ ೧೮ರಂದು ಒಮ್ಮೆ ೧೮ ಸಾವಿರ ರೂ., ೧೩ ನಿಮಿಷದ ಅಂತರದಲ್ಲಿ ೩ ಸಾವಿರ ರೂ. ಹೀಗೆ ಒಟ್ಟು ೨೧ ಸಾವಿರ ರೂ. ಮಾಯವಾಗಿವೆ. ಈ ಕುರಿತು ಯಾವುದೇ ಎಸ್ಎಂಎಸ್ ಬಂದಿಲ್ಲ. ಮಾರನೇ ದಿನ ಈ ಹಣ ಹೋಗಿರುವುದು ಗೊತ್ತಾಗಿದೆ. ತಮ್ಮ ಖಾತೆಯಿಂದ ಅಕ್ರಮವಾಗಿ ಅಪರಿಚಿತ ವ್ಯಕ್ತಿ ಹಣ ತೆಗೆದುಕೊಂಡಿದ್ದು, ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಠಾಣೆ, ಸೈಬರ್ ಕ್ರೈಂ ವಿಭಾಗ ಹಾಗೂ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ದೂರು ಸಲ್ಲಿಸಿದ್ದಾರೆ.
ನಗರದ ಸನ್ನಿ ಗುತ್ತೇದಾರ್ ಎಂಬುವವರ ಖಾತೆಯಿಂದ ೧.೫೦ ಲಕ್ಷ ರೂ. ಡ್ರಾ ಮಾಡಿಕೊಳ್ಳಲಾಗಿದೆ. ಸೋಮವಾರ ಮಧ್ಯಾಹ್ನ ಮೊಬೈಲ್ ಚಾರ್ಚ್ಗೆ ಹಚ್ಚಿ ಮಲಗಿದಾಗ ನಿರಂತರ ಮೆಸೇಜ್ ಬರುತ್ತಿರುವುದು ಗಮನಸಿದ್ದು, ಖಾತೆಯಿಂದ ಹಣ ಕಟ್ ಆಗಿರುವ ಬಗ್ಗೆ ಸಂದೇಶ ಬಂದಿವೆ. ಎರಡೇ ನಿಮಿಷದ ಅಂತರದಲ್ಲಿ ಒಂದೇ ಸಲಕ್ಕೆ ೫೦ ಸಾವಿರ ರೂ.ನಂತೆ ಒಟ್ಟು ೧.೫೦ ಸಾವಿರ ರೂ. ಕಟ್ ಆಗಿವೆ. ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ.
ಲಿಂಕ್ ಕ್ಲಿಕ್ ಮಾಡಿ ಹಣ ಕಳಕೊಂಡ್ರು: ಕಳೆದ ಭಾನುವಾರ ಮೊಬೈಲ್ ಸಂಖ್ಯೆಗೆ ಬಂದ ಅಪರಿಚಿತ ಲಿಂಕ್ ಕ್ಲಿಕ್ ಮಾಡಿಕೊಂಡು ಬಸವಕಲ್ಯಾಣದ ವ್ಯಾಪಾರಿ ಗೋರಖನಾಥ ಕಾಂಬಳೆ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ವಾಟ್ಸಪ್ ಸಂಖ್ಯೆಗೆ ಬಂದ ಅಪರಿಚಿತ ಲಿಂಕ್ ಮೇಲೆ ಕ್ಲಿಕ್ ಮಾಡಿದ ಕಾರಣ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ೧.೨೧ ಲಕ್ಷ ರೂ. ಲೂಟಿ ಮಾಡಲಾಗಿದೆ. ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.