ಸಕಲೇಶಪುರ: ಆದಾಯದಲ್ಲಿ ಅಲ್ಪ ಭಾಗವನ್ನಾದರೂ ಸಮಾಜ ಸೇವೆಗೆ ಅರ್ಪಿಸಿದಾಗ ತೃಪ್ತಿ ದೊರಕುತ್ತದೆ ಎಂದು ಸಮಾಜ ಸೇವಕ ಬನ್ನಹಳ್ಳಿ ಪುನೀತ್ ಹೇಳಿದರು. ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಸೋಮವಾರ ಪಂಚಲೋಹದ ಅಶ್ವಾರೂಢ ಶ್ರೀ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಉದ್ಯಮಿಯೂ ತನ್ನ ಹುಟ್ಟೂರಿನ ಅಭಿವೃದ್ಧಿಗೆ ಸಲ್ಪ ಹಣ ವಿನಿಯೋಗಿಸಿದಾಗ ಮಾತ್ರ ಆ ಊರುಗಳು ಅಭಿವೃದ್ಧಿ ಹೊಂದುತ್ತದೆ. ಸಮಾಜ ನಮಗೇನು ನೀಡಿದೆ ಎಂಬುದಕ್ಕಿಂತ ನಾವೇನು ಸಮಾಜಕ್ಕೆ ನೀಡಿದ್ದೇವೆ ಎಂಬ ಆತ್ಮವಿಮರ್ಶೆ ಅಗತ್ಯ ಎಂದರು.
ಸ್ವಂತಕ್ಕೆ ಬದುಕುವುದು ಸ್ವಾರ್ಥವಾಗುತ್ತದೆ. ಸರ್ವರಿಗಾಗಿ ಬದುಕುವವರು ಮಹಾತ್ಮರಾಗುತ್ತಾರೆ. ಇಂತಹ ಬದುಕು ನಡೆಸಿದ ಬಸವಣ್ಣನವರು ಭೂಮಿ ಇರುವ ತನಕವೂ ಚಿರಸ್ಥಾಯಿ ಎಂದರು. 20 ಅಡಿ ಎತ್ತರ ಹಾಗೂ 1.5 ಟನ್ ತೋಕದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್, ಮುಖಂಡರಾದ ಮೂಗಲಿ ಧರ್ಮಣ್ಣ, ಸಂಗಪ್ಪಗೌಡ, ಗಗನ್, ಜಯರಾಜ್ ಕಾಮನಹಳ್ಳಿ ಇತರರು ಇದ್ದರು.