ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಸೋಮವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಂದೇ ತಿಂಗಳಲ್ಲಿ 50.92 ಲಕ್ಷ ರೂ.ಗಳಿಗೂ ಅಧಿಕ ಹಣ ಸಂಗ್ರಹವಾಗಿದೆ.
‘ಶಕ್ತಿ’ ಯೋಜನೆ ಪರಿಣಾಮ ಹಾಗೂ ನವರಾತ್ರಿ ಮತ್ತು ದಸರಾ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಒಂದೇ ತಿಂಗಳಲ್ಲಿ ದೇಗುಲದ ಎಲ್ಲ 13 ಹುಂಡಿಗಳು ತುಂಬಿದ್ದವು. ಈ ಹಿನ್ನೆಲೆಯಲ್ಲಿ ಎಣಿಕೆ ಮಾಡಿದಾಗ 49,30,289 ರೂ. ನೋಟುಗಳು ಹಾಗೂ 1,61,912 ರೂ. ಮೌಲ್ಯದ ನಾಣ್ಯಗಳು ಸೇರಿ ಒಟ್ಟು 50,92,201 ರೂ. ಸಂಗ್ರಹವಾಗಿದೆ. ಜತೆಗೆ 104 ಗ್ರಾಂ 980 ಮಿಲಿ ಚಿನ್ನ ಹಾಗೂ 484 ಗ್ರಾಂ ಬೆಳ್ಳಿ ಕಾಣಿಕೆ ದೊರೆತಿವೆ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ತಿಳಿಸಿದ್ದಾರೆ.
ಕೇವಲ ನೋಟು, ನಾಣ್ಯಗಳೇ ಅಲ್ಲದೆ, ಈ ಬಾರಿ 49 ಅಮೆರಿಕನ್ ಡಾಲರ್, 1,020 ಯುರೋ, ರೊಮೆನಿಯಾದ 11 ಲಿಯು ಹಾಗೂ ಸಿಜೆಕ್ನ 200 ಕೊರುನಾ ದೊರೆತಿವೆ ಎಂದು ಮಾಹಿತಿ ನೀಡಿದ್ದಾರೆ.