ಆಲ್ದೂರು: ಸಮೀಪದ ಇಳೇಖಾನ್,ಕಠಾರದಹಳ್ಳಿ, ಕಂಚಿನಕಲ್ ದುರ್ಗ, ಕಂಡರಕಸ್ಕೆ ಗ್ರಾಮಗಳಲ್ಲಿ ಶನಿವಾರ ಕಾಡಾನೆಗಳು ಅಡಕೆ, ಬಾಳೆ ಗಿಡಗಳನ್ನು ನಾಶ ಮಾಡಿವೆ.
ಇಳೇಖಾನ್ ಗ್ರಾಮದ ಶಿವಾನಂದ್ ಎಂಬುವರ ಮನೆಯ ಹಿಂಭಾಗದಲ್ಲಿಯೇ ಕಾಡಾನೆಗಳು ದಾಳಿ ನಡೆಸಿದ್ದು, ಬಾಳೆ ಗಿಡ, ಕಾಫಿ ಗಿಡಗಳನ್ನು ನೆಲಸಮ ಮಾಡಿವೆ. ಹವಾಮಾನ ವೈಪರೀತ್ಯದಿಂದ ಈಗಾಗಲೇ ಕಾಫಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈಗ ಕಾಡಾನೆಗಳ ಹಾವಳಿ ಬೆಳೆಗಾರರ ನಿದ್ದೆಗೆಡಿಸಿದೆ. ಮನೆ ಹತ್ತಿರವೇ ಬೆಳೆ ನಾಶ ಮಾಡುತ್ತಿದ್ದು ಬೆಳೆಗಾರರು ಅಸಹಾಯಕರಾಗಿದ್ದಾರೆ. ಅರಣ್ಯ ಇಲಾಖೆ ಗಮನಕ್ಕೆ ತಂದರೆ ಅವರು ಬಂದು ಪಟಾಕಿ ಸಿಡಿಸಿ ಹೋಗುತ್ತಾರೆ. ಮತ್ತೆ ರಾತ್ರಿ ಆನೆಗಳು ವಾಪಸು ಬರುತ್ತವೆ. ಕಾಡಾನೆಗಳನ್ನು ಇಲ್ಲಿಂದ ಸ್ಥಳಾಂತರ ಮಾಡುವ ಕೆಲಸ ಆಗಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.