ಬಾಗಲಕೋಟೆ: ನೇಕಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸಮಸ್ತ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸಮಸ್ತ ನೇಕಾರರ ಸಮುದಾಯ ಮುಖಂಡ ಡಾ.ಎಂ.ಎಸ್.ದಡ್ಡೇನವರ, ಮಲ್ಲಿಕಾರ್ಜುನ ಹಂಡಿ ಆಗ್ರಹಿಸಿದರು.
ಹುಬ್ಬಳ್ಳಿಯ ನೀಲಕಂಠ ಮಠದ ಶಿವಶಂಕರ ಸ್ವಾಮೀಜಿ ನೇತೃತ್ವದಲ್ಲಿ ಬಾಗಲಕೋಟೆ ನಗರದಲ್ಲಿ ಫೆ.6 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ನವನಗರದ ಎಲ್ಐಸಿ ವೃತ್ತದಿಂದ ಮೆರವಣಿಗೆ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿ, ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್.ಜಿ.ಹಾವನೂರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಂತೆ ರಾಜ್ಯದಲ್ಲಿರುವ ಕುರುಹಿನಶೆಟ್ಟಿ, ಪದ್ಮಸಾಲಿ, ಸ್ವಕುಳಿಸಾಲಿ, ಹಟಗಾರ, ಬಣಗಾರ, ಶಿಂಪಿ, ಶಿವಸಂಪಿ, ಪಟ್ಟಸಾಲಿ, ಮಗ್ಗ, ಬಿಳಿ ಮಗ್ಗ, ಜಾಡ, ಕುರ್ಣಿ, ಕೋಷ್ಟಿ, ತೊಗಟಿವೀರ, ದೇವಾಂಗ ಎನ್ನುವ ವಿವಿಧ ಹೆಸಿರಿನಿಂದ ಗುರುತಿಸಿಕೊಂಡಿರುವ ನೇಕಾರ ಜನಾಂಗಗಳನ್ನು ಪ್ರವರ್ಗ 2 ಎ ದಲ್ಲಿ ಗುರುತಿಸಿ ಮೀಸಲಾತಿ ನೀಡಲಾಗಿದೆ. ಆದರೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದರು.
ನೇಕಾರ ಸಮುದಾಯಕ್ಕೆ ಸರ್ಕಾರಗಳು ನಿರ್ಲಕ್ಷೃ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಆದ್ದರಿಂದ ಬೇಡಿಕೆ ಈಡೇರಿಕೆಗಾಗಿ ಶಾಂತಿಯುತವಾಗಿ ಹೋರಾಟ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು. ನೇಕಾರ ಸಮುದಾಯ ಮುಖಂಂಡರಾದ ವಿ.ವಿ.ಶೀರಗನ್ನವರ, ಮುರಿಗೆಪ್ಪ ನಾರಾ, ಶ್ರೀನಿವಾಸ ಬಳ್ಳಾರಿ, ನಾಗರಾಜ ಕುಪ್ಪಸ್ತ ಸುದ್ದಿಗೋಷ್ಠಿಯಲ್ಲಿ ಇದ್ದರು.