ಬಾಗಲಕೋಟೆ: ಉಪಚುನಾವಣೆಯಲ್ಲಿ ಅಧಿಕಾರ ಮತ್ತು ಹಣ ಕೆಲಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆರ್ಆರ್ ನಗರ ಮತ್ತು ಶಿರಾ ಗೆಲ್ಲುತ್ತೇವೆ ಅಂದುಕೊಂಡಿದ್ದೇವು. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಆದರೆ, ಸರ್ಕಾರದಲ್ಲಿ ಇರುವವರು ಚುನಾವಣೆ ನಿಷ್ಪಕ್ಷಪಾತ ಹಾಗೂ ಮುಕ್ತವಾಗಿ ನಡೆಸುವುದು ಜವಾಬ್ದಾರಿ. ನನ್ನ ಮಾಹಿತಿಯಂತೆ ಬಿಜೆಪಿ ಅಧಿಕಾರ ದುರಪಯೋಗ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದೆ. ಅಧಿಕಾರ ಮತ್ತು ಹಣ ಚುನಾವಣೆಯಲ್ಲಿ ಕೆಲಸ ಮಾಡಿದೆ. ಏನೇ ಇರಲಿ ಜನರು ಬಿಜೆಪಿಗೆ ತೀರ್ಪು ಕೊಟ್ಟಿದ್ದಾರೆ. ಒಪ್ಪಿಕೊಳ್ಳಲೇಬೇಕು ಎಂದರು.
ಇದನ್ನೂ ಓದಿ: ನ್ಯಾಯಬೆಲೆ ಅಂಗಡಿ ಕಮಿಷನ್ ಹಣ ಬಿಡುಗಡೆ ; ಆಹಾರ ಸಚಿವ ಕೆ.ಗೋಪಾಲಯ್ಯ ಮಾಹಿತಿ
ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇರಲಿಲ್ಲ. ಶಿರಾದಲ್ಲಿ ಜಿಲ್ಲೆಯ ಎಲ್ಲ ಮುಖಂಡರು ಒಮ್ಮತದಿಂದ ಶಿಫಾರಸು ಮಾಡಿದ್ದರು. ಆರ್ಆರ್ ನಗರದಲ್ಲಿ ಅಭ್ಯರ್ಥಿ ಆಯ್ಕೆ ವಿಳಂಬ ಆಗಿತ್ತು. ವಿದ್ಯಾವಂತೆ, ಒಳ್ಳೆಯ ಅಭ್ಯರ್ಥಿ ಹಾಕಿದ್ದರು. ಆದರೆ, ಸರ್ಕಾರ ಅಧಿಕಾರ ಹಾಗೂ ಹಣ ಹರಿಸಿ ಗೆದ್ದಿದೆ.
ಫಲಿತಾಂಶದಿಂದ ಅವರ ಶಕ್ತಿ ಹೆಚ್ಚಲ್ಲ, ನಮ್ಮ ಶಕ್ತಿ ಕಡಿಮೆ ಆಗಲ್ಲ. ಆರ್ಆರ್ ನಗರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಇತ್ತು ಎಂದು ಕಾಣಿಸುತ್ತದೆ. ಅಲ್ಲಿ ವೀಕ್ ಕ್ಯಾಂಡಿಡೇಟ್ ಹಾಕಿದ್ದರು ಎಂದರು.
ಬಿಹಾರ ಫಲಿತಾಂಶ ಕುರಿತು ಮಾತನಾಡಿ ಬೆಳಗ್ಗೆ ಮಹಾಘಟಬಂಧನ್ ಲೀಡ್ ಇತ್ತು. ಕ್ರಮೇಣ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೂ ಮತ ಏಣಿಕೆ ನಡೆಯುತ್ತಿದೆ. ಅಂತಿಮವಾಗಿ ಏನಾಗುತ್ತೋ ನೋಡಬೇಕು. ಎಲ್ಲ ಸಮೀಕ್ಷೆಗಳು ಮಹಾಘಟಬಂಧನ ಗೆಲ್ಲುತ್ತೆ ಅಂದಿದ್ವು. ಆದರೆ, ಅದಕ್ಕೆ ತದ್ವಿರುದ್ಧ ಫಲಿತಾಂಶ ಬರುತ್ತಿರುವುದನ್ನು ನೋಡಿದರೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)
ಬಿಹಾರ ಫೈಟ್- ನೆಟ್ಟಿಗರ ಮೀಮ್ಸ್ ನಿಜವಾಯ್ತು… ಇವಿಎಂನಲ್ಲಿ ದೋಷ ಎಂದ ಕಾಂಗ್ರೆಸ್!