ಬಾಗಲಕೋಟೆ: ಅಯೋಧ್ಯೆ ರಾಮಮಂದಿರ ಮಂಡಲರಾಧನೆ ಪೂಜೆಗೆ ಮುಧೋಳ ನಗರದ ಅರ್ಚಕ ಗುರುನಾಥ ಜೋಷಿ ಆಯ್ಕೆಯಾಗಿದ್ದಾರೆ.
ಗುರುನಾಥ ಜೋಷಿ ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿ. ಸದ್ಯ ಮುಧೋಳ ನಗರದಲ್ಲಿ ವಾಸವಾಗಿದ್ದಾರೆ. ಗುರುನಾಥ ಜೋಷಿ ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದವರು. ಶುಕ್ಲ ಯಜುರ್ವೇದ ಅಧ್ಯಯನ ಮಾಡಿದವರು.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಮೂಲಕ ಗುರುನಾಥ ಜೋಷಿ ಆಯ್ಕೆಯಾಗಿದ್ದಾರೆ. ಅಯೋದ್ಯೆ ರಾಮಮಂದಿರದಲ್ಲಿ 48 ದಿನ ಮಂಡಲಾರಾಧನೆ ಪೂಜೆ ನಡೆಯಲಿದ್ದು, 15-16ನೇ ತಾರೀಖಿನವರೆಗೆ ನಡೆಯುವ ಎರಡು ದಿನದ ಪೂಜೆಯಲ್ಲಿ ಗುರುನಾಥ ಜೋಷಿ ಭಾಗಿಯಾಗಲಿದ್ದಾರೆ.
ಅರ್ಚಕರ ಪರಿಚಯ
ಗುರುನಾಥ ಜೋಷಿ ಮುಧೋಳ ನಗರ ಸದ್ಗುರು ಶ್ರೀ ಚಿದಂಬರ ವೈಧಿಕ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ. ಮೂಲತಃ ಕುಟುಂಬದಿಂದ ಅರ್ಚಕ ವೃತ್ತಿ. ಈ ಮುಂಚೆ ಮುಧೋಳ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ಗುರುನಾಥ ಜೋಷಿ ಅರ್ಚಕರಾಗಿದ್ದರು.
“ಅಯೋಧ್ಯೆ ರಾಮಮಂದಿರ ಮಂಡಲಾರಾಧನೆಗೆ ಆಯ್ಕೆ ಮಾಡಿದ್ದು ನಮ್ಮ ಪೂರ್ವಜರು ಮಾಡಿದ ಪುಣ್ಯ. ಇಂತಹ ಅವಕಾಶ ಸಿಕ್ಕಿದ್ದು ಎಂದು ಮರೆಯಲಾಗದು. ರಾಮದೇವರು ಎಲ್ಲರಿಗೂ ಒಳಿತನ್ನು ಮಾಡಲಿ” ಎಂದು ಗುರುನಾಥ ಜೋಷಿ ತಿಳಿಸಿದ್ದಾರೆ.