ಬಾಗಲಕೋಟೆ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಶೀಘ್ರದಲ್ಲಿ ಲಸಿಕೆ ಬರಲಿದೆ. ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್-19 ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತು ಗುರುವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೀಘ್ರದಲ್ಲಿಯೇ ಕೋವಿಡ್-19 ನಿಯಂತ್ರಿಸಲು ಲಸಿಕೆಯನ್ನು ಪರಿಚಯಿಸಲಾಗುತ್ತಿದ್ದು, ಲಸಿಕೆ ಸಿದ್ಧತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಮೊದಲ ಹಂತದಲ್ಲಿ ಆರೋಗ್ಯ ಸೇವೆಯನ್ನು ಸರ್ಕಾರಿ ಮತ್ತು ಖಾಸಗಿ ಲಾನುಭವಿಗಳಿಗೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿರುವ ಮೊದಲ ಹಂತದ ಲಾನುಭವಿಗಳ ವಿವರವನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಪಟ್ಟಿಯಿಂದ ಯಾರು ಬಿಟ್ಟು ಹೋಗದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿರುವ ಕೋಲ್ಡ್ ಸ್ಟೋರೇಜ್ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಿಂದ ಸರಬರಾಜು ಮಾಡಿದ ನಂತರ ತಾಲೂಕು ಮಟ್ಟದಲ್ಲಿಯೂ ಶೀಥಲ ಘಟಕಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಸೇರಿ ಈಗಾಗಲೇ 10473 ಲಾನುಭವಿಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ದಾಖಲಾದ ಲಾನುಭವಿಗಳ ಪೈಕಿ ಬಾದಾಮಿ ತಾಲೂಕಿನಿಂದ 1433, ಬಾಗಲಕೋಟೆ 3345, ಬೀಳಗಿ 588, ಹುನಗುಂದ 2021, ಜಮಖಂಡಿ 2216 ಹಾಗೂ ಮುಧೋಳದಲ್ಲಿ 870 ಜನ ಲಾನುಭವಿಗಳಿದ್ದಾರೆ ಎಂದು ತಿಳಿಸಿದರು.
ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಶಸಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ ಲಸಿಕೆಯನ್ನು ಮೂರು ಹಂತದಲ್ಲಿ ನೀಡಲಾಗುತ್ತಿದ್ದು, ಮೊದಲನೇ ಹಂತದಲ್ಲಿ ಹೆಲ್ತ್ಕೇರ್ ಸಿಬ್ಬಂದಿಯಾದ ಸರ್ಕಾರಿ ಮತ್ತು ಖಾಸಗಿ ವೈದ್ಯರು, ತಂತ್ರಜ್ಞರು, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೋವಿಡ್ ವಾರಿಯರ್ಸ್ಗಳಿಗೆ ನೀಡಲಾಗುತ್ತಿದೆ. 2ನೇ ಹಂತದಲ್ಲಿ ಪೌರಕಾರ್ಮಿಕರು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ, 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷ ಒಳಗಿರುವ ಮಧುಮೇಹ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದರು.
ಕೋವಿಡ್ ಲಸಿಕೆ ಸಂಗ್ರಹಿಸುವ ಸಾಮರ್ಥ್ಯ ಜಿಲ್ಲೆಯಲ್ಲಿ ಹೆಚ್ಚಿಗೆ ಇದ್ದು, ಈಗಾಗಲೇ ಕೆಲವೊಂದು ಲಸಿಕೆಗಳನ್ನು ಹತ್ತಿರದ 4 ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕೋವಿಡ್ ಲಸಿಕೆಯನ್ನು ಎರಡು ಡೋಜ್ ನೀಡಲಾಗುತ್ತಿದ್ದು, ಮೊದಲು ಒಂದು ಡೋಜ್ ನೀಡಿದ ನಂತರ ಅರ್ಧ ಗಂಟೆಗಳ ಕಾಲ ಲಸಿಕೆ ಪಡೆದವರಿಗೆ ಯಾವುದಾದರೂ ರಿಯಾಕ್ಷನ್ ಆಗುತ್ತಿರುವ ಬಗ್ಗೆ ಗಮನಿಸಿ ನಂತರ ಕಳುಹಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಇಲ್ಲಿವರೆಗೆ 13622 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಪೈಕಿ 13429 ಜನ ಗುಣಮುಖರಾಗಿದ್ದಾರೆ. ಕೋವಿಡ್ ಪಾಸಿಟಿವ್ ಕೇಸ್ಗಳಲ್ಲಿ ಐಎಲ್ಐ 6226, ಸಾರಿ 734, ಪ್ರಾಥಮಿಕ ಸಂಪರ್ಕ 2351, ದ್ವಿತೀಯ ಸಂಪರ್ಕ 115, ಪ್ರವಾಸದ ಹಿನ್ನೆಲೆಯ 221, ಪತ್ತೆ ಹಚ್ಚಲಾಗುತ್ತಿರುವ ಕೇಸ್ 3975 ಇವೆ. ಹೋಮ್ ಐಸೋಲೇಷನ್ದಲ್ಲಿದ್ದ 4744 ಪೈಕಿ 28 ಜನ ಮಾತ್ರ ಸಕ್ರಿಯ ಪ್ರಕರಣಗಳಿದ್ದು, 4716 ಜನ ಬಿಡುಗಡೆ ಹೊಂದಿದ್ದಾರೆ. ಇಲ್ಲಿವರೆಗೆ 212579 ಸ್ಯಾಂಪಲ್ಗಳನ್ನು ಪರೀಕ್ಷಿಸಿರುವುದಾಗಿ ತಿಳಿಸಿದರು.