ಬಾಗಲಕೋಟೆ: ಕೋವಿಡ್ ಎರಡನೇ ಸಾಕಷ್ಟು ಸಾವು, ನೋವು ಉಂಟಾಗುವಂತೆ ಮಾಡಿದೆ. ಈ ನಡುವೆ ಕರೊನಾ ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿವೆ ಎನ್ನುವ ಕುರಿತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಕೋಟೆನಗರಿಯ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಆರಂಭಿಸಲಾಗಿದೆ.
ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾರ್ಗದರ್ಶನದಲ್ಲಿ 30 ಐ.ಸಿ.ಯು ಮತ್ತು 30 ಆಕ್ಸಿಜನ್ ಬೆಡ್ಗಳ ಸೌಲಭ್ಯದ ಚಿಕ್ಕಮಕ್ಕಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳನ್ನು ಖರೀದಿಸಲಾಗಿದೆ.
ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ, ಚಿಕ್ಕಮಕ್ಕಳ ತಜ್ಞೆ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಸೀ ರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಆಶಾಲತಾ ಮಲ್ಲಾಪುರ ಹಾಗೂ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ನೇತೃತ್ವದ ತಂಡ ಸೇವೆ ಒದಗಿಸಲು ಸಜ್ಜಾಗಿದೆ.
5 ಮಕ್ಕಳು, 3 ನವಜಾತು ಶಿಶುಗಳಿಗೆ ಚಿಕಿತ್ಸೆ
ಈಗಾಗಲೇ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಐದು ಮಕ್ಕಳು ಮತ್ತು ಮೂರು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿ ಭರವಸೆ ಮೂಡಿಸಲಾಗಿದೆ.
ಕೊಲ್ಹಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದ ಒಂಬತ್ತು ದಿನಗಳ ಮಗುವನ್ನು ಉಸಿರಾಟದ ತೊಂದರೆಯ ಕಾರಣದಿಂದ ಮೇ 20 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ತಪಾಸಣೆ ನಂತರ ಮಗುವಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತು. ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದಲ್ಲಿ ಮಗುವಿಗೆ ಎಚ್.ಎ್.ಎನ್.ಸಿ. ಯಂತ್ರ ಅಳವಡಿಸಿ ಚಿಕಿತ್ಸೆ ನೀಡಲಾಯಿತು. ಸರಿಯಾದ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಿದ ಲವಾಗಿ ಮಗು ಚೇತರಿಸಿಕೊಂಡಿದೆ.
ಇನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಆರು ತಿಂಗಳ ಮಗುವನ್ನು ಉಸಿರಾಟದ ತೊಂದರೆ ಕಾರಣದಿಂದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಂತರ ಮಗು ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿರುವುದು ದೃಢಪಟ್ಟಿತು. ಈ ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಇನ್ನುಳಿದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಮಕ್ಕಳು ಸ್ಪಂದಿಸುತ್ತಿರುವರು. ಈ ಎಲ್ಲ ಎಂಟು ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ತಾಯಂದಿರಿಂದ ಹರಡಿರುವುದು ಸ್ಪಷ್ಟವಾಗಿದೆ. ಕೋವಿಡ್ ಸೋಂಕು ತಗುಲಿದ ಬಾಣಂತಿಯರು ಮಾಸ್ಕ್ ಧರಿಸಿ, ಕೈ ತೊಳೆದು ನವಜಾತ ಶಿಶುವಿಗೆ ಎದೆಹಾಲು ಉಣಿಸಬೇಕು. ಪಾಲಕರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಲ್ಲಿ ಅಂಥವರು ಸರಿಯಾದ ಚಿಕಿತ್ಸೆ ಪಡೆಯಬೇಕು ಮತ್ತು ಸೋಂಕು ಮಕ್ಕಳಿಗೆ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು ಎಂದು ಆಸ್ಪತ್ರೆ ವೈದ್ಯರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.