ಬಾಗಲಕೋಟೆ: ಹಾವು, ಚೇಳು ಅಂತಹ ವಿಷ ಜಂತುಗಳನ್ನು ತಿನ್ನುವವರನ್ನು ನೋಡಿದ್ದೇವೆ. ಆಟವಾಡುತ್ತಲೇ ಚಿಕ್ಕ ಮಕ್ಕಳು ನಾಣ್ಯ ನುಂಗಿದ್ದು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ 187 ನಾಣ್ಯಗಳನ್ನು ನುಂಗಿ ಅಚ್ಚರಿ ಎಂಬಂತೆ ಸಾವಿನ ದವಡೆಯಿಂದ ಪಾರಾಗಿದ್ದಾರೆ!
ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ವ್ಯಕ್ತಿಯ ಹೊಟ್ಟೆಯಿಂದ ನಾಣ್ಯಗಳನ್ನು ಹೊರ ತೆಗೆದು ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಸಂತೆ ಕೆಲ್ಲೂರ ಗ್ರಾಮದ 54 ವರ್ಷದ ದ್ಯಾಮಪ್ಪ ಹರಿಜನ ಎಂಬುವವರು 5 ರೂ. ಮುಖಬೆಲೆಯ 56 ನಾಣ್ಯ, 2 ರೂ. ಮೌಲ್ಯದ 51 ನಾಣ್ಯ ಮತ್ತು 1 ರೂ. ಮುಖಬೆಲೆಯ 80 ನಾಣ್ಯ ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು. ಆ ನಾಣ್ಯಗಳ ತೂಕ ಒಂದೂವರೆ ಕಿಲೋ ಇತ್ತು. ಜೀವಕ್ಕೂ ಅಪಾರ ತಂದೂಡ್ಡಿತ್ತು.
ವಿಷಯ ತಿಳಿದ ಕುಟುಂಬಸ್ಥರು ನ.26ರಂದು ಬಾಗಲಕೋಟೆಯ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆಗೆ ಒಳಪಡಿಸಿದ್ದರು. ಡಾ.ಈಶ್ವರ ಕಲಬುರಗಿ ಅವರು ದ್ಯಾಮಪ್ಪನ ಹೊಟ್ಟೆಯನ್ನು ಎಕ್ಸ್-ರೇ ಮೂಲಕ ಪರೀಕ್ಷಿಸಿದಾಗ ನಾಣ್ಯಗಳು ಕಂಡುಬಂದವು. ರೋಗಿಯ ಜೀವಕ್ಕೆ ಅಪಾಯ ಇರುವುದು ತಿಳಿದುಬಂತು. ನಂತರ ಎಂಡೊಸ್ಕೋಪಿ ಮಾಡಿ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯ ಡಾ.ಈಶ್ವರ ಕಲಬುರ್ಗಿ ಮತ್ತು ಡಾ.ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ.ಅರ್ಚನಾ ಮತ್ತು ಡಾ.ರೂಪಾ ಹುಲಕುಂದೆ ಅವರು ಯಶಸ್ವಿಯಾಗಿ ನಾಣ್ಯಗಳನ್ನು ಹೊರತೆಗೆದಿದ್ದಾರೆ. ಸದ್ಯ ದ್ಯಾಮಪ್ಪ, ಚೇತರಿಸಿಕೊಳ್ಳುತ್ತಿದ್ದಾರೆ.
ವೈದ್ಯರ ತಂಡದ ಸಾಹಸಕ್ಕೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪುರ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವ ಕಾರಣಕ್ಕೆ ಇಷ್ಟು ಕಾಯಿನ್ಗಳನ್ನು ದ್ಯಾಮಪ್ಪ ನುಂಗಿದರು ಎಂಬುದು ನಿಗೂಢವಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಹೀಗೆ ಮಾಡಿರಬೇಕು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.