ಬಾದಾಮಿ: ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನ ರಚಿಸಿ ಅಸ್ಪಶ್ಯತೆ ನಿವಾರಣೆ ಮತ್ತು ಮಹಿಳಾ ಸ್ವಾತಂತ್ರೃ ನೀಡುವಂತೆ ಪ್ರತಿಪಾದಿಸಿದ್ದರು ಎಂದು ಶಿಕ್ಷಣ ಸಂಯೋಜಕ ವಿ.ಎಸ್. ಹಿರೇಮಠ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿ ತಮ್ಮ ಅನುಯಾಯಿಗಳನ್ನು ಸನ್ಮಾರ್ಗದತ್ತ ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರು ಎಂದು ಹೇಳಿದರು.
ಧರ್ಮ, ಸತ್ಯಕ್ಕೆ ಒಂದೇ ದಾರಿ. ಧರ್ಮದ ಸಂರಕ್ಷಣೆಯಾಗಬೇಕು, ವೀರಶೈವ ಧರ್ಮದ ಆಳ ಅಗಲ ಅರ್ಥೈಸಿಕೊಳ್ಳಬೇಕು. ರೇಣುಕರು ಸಿದ್ಧಾಂತ ಸಿಖಾಮಣಿಯಲ್ಲಿ ಧರ್ಮದ 10 ಸೂತ್ರಗಳನ್ನು ತಿಳಿಸಿದ್ದಾರೆ. ಅದರಂತೆ ಬಾಳಿದರೆ ಸುಸಂಸ್ಕೃತ ಸಮಾಜ ನಮ್ಮದಾಗುತ್ತದೆ ಎಂದು ಹೇಳಿದರು.
ಡಿವೈಎಸ್ಪಿ ಮಹಾಂತೇಶ ಹಿರೇಮಠ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕಾದರೆ ಶಿಕ್ಷಣ ದ್ವಾರ ಬಾಗಿಲು ಇದ್ದಂತೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಿ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ. ಹಂಗರಗಿ ಮಾತನಾಡಿ, ಜನರನ್ನು ಒಳ್ಳೆಯ ಮಾರ್ಗಕ್ಕೆ ಕರೆದುಕೊಂಡು ಹೋಗುವುದು, ಸಮಾಜದಲ್ಲಿ ಶಾಂತಿ, ನೆಮ್ಮದಿ ಬದುಕು ರೂಪಿಸಿ ಕೊಡುವುದು ಜಂಗಮ ಸಮಾಜದ ಕರ್ತವ್ಯವಾಗಿದೆ ಎಂದರು.
ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಿ.ಪಿ. ಹಳ್ಳೂರ ಮಾತನಾಡಿ, ಪ್ರಸ್ತುತ ಜಂಗಮ ಸಮಾಜ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಸಮಾಜದ ಜನತೆ ಎಚ್ಚೆತ್ತುಕೊಂಡು ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಬೇಕು ಎಂದರು.
ಎ.ಎಸ್. ವಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಈಶ್ವರಯ್ಯ ಳಾರಿ ಉಪಸ್ಥಿತರಿದ್ದರು. ಕೆಎಎಸ್ ಪಾಸಾದ ಮಹಾಂತೇಶ ಹಂಗರಗಿ ಮತ್ತು ಡಿವೈಎಸ್ಪಿ ವೀರಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು ಆಶೀರ್ವಚನ ನೀಡಿದರು. ಹೊನ್ನಯ್ಯ ಹಿರೇಮಠ ನಿರೂಪಿಸಿದರು.