ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಗೀಡಾದ ಪ್ರವೀಣ್ ನೆಟ್ಟಾರ್ ಹತ್ಯೆ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಚೈನ್ ಲಿಂಕ್ ತರ ಇದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಗುರುವಾರ ಮಧ್ಯಾಹ್ನ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಪ್ರವೀನ್ ಹತ್ಯೆ ಬಳಿಕ ಎದ್ದಿರುವ ಕಾರ್ಯಕರ್ತರ ಆಕ್ರೋಶದ ಬಗ್ಗೆ ಅರಿವಾಗಿದೆ. ಕಾರ್ಯಕರ್ತರ ಆಕ್ರೋಶದಿಂದ ನಾಯಕರು ತಲೆ ಎತ್ತಿ ಓಡಾಡಲು ಸಾಧ್ಯವಾಗುತ್ತಿಲ್ಲ. ಸಿಎಂ, ಗೃಹ ಸಚಿವರು ಈ ಹತ್ಯೆ ಪ್ರಕರಣವನ್ನು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಂಥ ಘಟನೆ ಪುನಾರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರವೀಣ ಪತ್ನಿಗೆ ಸರ್ಕಾರಿ ಉದ್ಯೋಗ: ಕೊಲೆಯಾದ ಪ್ರವೀಣ್ ಪತ್ನಿಗೆ ಸರ್ಕಾರಿ ಉದ್ಯೋಗ ಆಗಲೆಬೇಕು, ಆಕೆ ನಿಗದಿತ ವಯೋಮಿತಿಯ ಒಳಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರ ಮನವೊಲಿಸುತ್ತೇವೆ ಎಂದು ವಿಜಯೇಂದ್ರ ಹೇಳಿದರು. ಇವರದ್ದು ಬಡ ಕುಟುಂಬವಾಗಿದ್ದು ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ನಾವೆಲ್ಲರೂ ಸೇರಿ ಈ ಮನೆಯ ಜವಾಬ್ದಾರಿ ಹೊರುತ್ತೇವೆ. ಕಾರ್ಯಕರ್ತರೆಲ್ಲರೂ ಸಂಯಮದಿಂದ ಇರಬೇಕು, ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವ ಕ್ರಮವೂ ಸರಿಯಲ್ಲ ಎಂದರು.
ಎಸ್ಡಿಪಿಐ, ಪಿಎಫ್ಐ ವಿರುದ್ಧ ಕ್ರಮ: ಎಸ್ಡಿಪಿಐ, ಪಿಎಫ್ಐ ವಿರುದ್ಧ ಕ್ರಮ ಕೈಗೊಳ್ಳಲು ಇದು ಉತ್ತಮ ಸಮಯ ಎಂದು ವಿಜಯೇಂದ್ರ ಹೇಳಿದರು. ಕೊಲೆ ಮಾಡಿದವರು ಜಾಮೀನು ಮೇಲೆ ಹೊರಬರಬಾರದು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.