ಹುಬ್ಬಳ್ಳಿ: ರಾಷ್ಟ್ರದ ಗೃಹಸಚಿವರಾಗಿ ಅಮಿತ್ ಷಾ ಅವರು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ಇಂದು ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಕಡೆ ನೋಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಪರ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿರುವ ಮಹಾ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಬಿಎಸ್ವೈ, ಪ್ರತಿಪಕ್ಷಗಳು ಪೌರತ್ವ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಹೀಗಾಗಿ ಅಮಿತ್ ಷಾ ನೇತೃತ್ವದಲ್ಲಿ ಜನಜಾಗೃತಿ ಮಾಡುತ್ತಿದ್ದೇವೆ ಎಂದರು.
ಇನ್ನೂ ಕೇವಲ ಮೂರುವರೆ ವರ್ಷ ಮಾತ್ರ ಅಧಿಕಾರದಲ್ಲಿರುತ್ತೇವೆ. ಬಳಿಕ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಅಮಿತ್ ಷಾ ಹಾಗೂ ಪ್ರಧಾನಿ ಮೋದಿ ಕೈ ಬಲ ಪಡಿಸಬೇಕಿದೆ. ಹುಬ್ಬಳ್ಳಿ ಹೋರಾಟದ ಭೂಮಿಯಾಗಿದೆ. ಎಲ್ಲ ಮೋರ್ಚಾ ಘಟಕಗಳು ಬಲವಾಗಬೇಕಿದೆ. ತನ್ಮೂಲಕ ಪಕ್ಷ ಬಲಗೊಳಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಇದೇ ವೇಳೆ ರಾಜ್ಯ ಬಜೆಟ್ ವಿಚಾರವಾಗಿ ಮಾತನಾಡಿ ಮಾ.5ರಂದು ಬಜೆಟ್ ಮಂಡನೆಯಾಗಲಿದೆ. ರೈತಪರ ಹಾಗೂ ಜನಪರ ಬಜೆಟ್ ಮಂಡನೆ ಮಾಡುತ್ತೇವೆ. ರಾಜ್ಯವನ್ನ ಮಾದರಿ ರಾಜ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್)