ನವದೆಹಲಿ: ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ರಾಜಸ್ಥಾನದ ವಿಶೇಷ ಗುಲಾಬಿ ಮರಳುಗಲ್ಲುಗಳ ಅವಶ್ಯಕತೆ ಇದ್ದು, ಇವುಗಳ ನಿರಂತರ ಸರಬರಾಜಿಗೆ ರಾಜಸ್ಥಾನ ಸರ್ಕಾರ ಹಲವು ಕಾನೂನು ತೊಡಕುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಲಾಬಿ ಮರಳುಗಲ್ಲುಗಳು ಸಿಗುವ ಭರತ್ಪುರದ ಬ್ಯಾಂಡ್ ಬರೇಥಾ ವನ್ಯಜೀವಿ ಅಭಯಾರಣ್ಯದ ಬನ್ಸಿ ಪಹಾರ್ಪುರ ಬ್ಲಾಕ್ನಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯಡಿ ಅನುಮತಿ ಪಡೆಯಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
2016ರಲ್ಲಿ ಈ ಕಲ್ಲುಗಳ ಗಣಿಗಾರಿಕೆಯನ್ನು ನಿಷೇಧಿಸಲಾಯಿತು. ಆದಾಗ್ಯೂ ಅಕ್ರಮವಾಗಿ ಈ ಕಲ್ಲುಗಳ ಗಣಿಗಾರಿಕೆ ನಡೆಯುತ್ತಿತ್ತು. ಭರತ್ಪುರ ಆಡಳಿತವು ಕಳೆದ ಸೆಪ್ಟೆಂಬರ್ 7ರಂದು ಪಹಾರ್ಪುರದಲ್ಲಿ ಗುಲಾಬಿ ಮರಳುಗಲ್ಲುಗಳನ್ನು ಸಾಗಿಸುತ್ತಿದ್ದ 25 ಲಾರಿಗಳನ್ನು ವಶಪಡಿಸಿಕೊಂಡಿತ್ತು. ಇದರಿಂದಾಗಿ ಕುಪಿತಗೊಂಡ ವಿಶ್ವ ಹಿಂದು ಪರಿಷತ್ (ವಿಎಚ್ಪಿ) ಕಾರ್ಯಕರ್ತರು ಕಲ್ಲುಗಳ ಸರಬರಾಜು ತಡೆಯದಂತೆ ರಾಜಸ್ಥಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ರಾಮಮಂದಿರ ನಿರ್ಮಾಣ ರಾಷ್ಟ್ರದ ಕೆಲಸ ಎಂಬುದನ್ನು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಜಿಲ್ಲಾಧಿಕಾರಿ ನಾಥ್ಮಲ್ ಡಿಡೆಲ್, ಯಾವುದೇ ನಿರ್ದಿಷ್ಟ ಉದ್ದೇಶಕ್ಕಾಗಿ ಕಲ್ಲು ಸರಬರಾಜು ಮಾಡುವ ಬಗ್ಗೆ ಲಿಖಿತವಾಗಿ ಆದೇಶವಿಲ್ಲ ಎಂದಿದ್ದಾರೆ. ಅಯೋಧ್ಯೆಗೆ ಕಲ್ಲುಗಳ ನಿರಂತರ ಸರಬರಾಜನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಜಸ್ಥಾನ ಸರ್ಕಾರ ಗಣಿಗಾರಿಕೆಯನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಯೋಜಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಹೆಜ್ಜೆ ಇಟ್ಟಲ್ಲಿ ನೀಲಿ ಬೆಳಕು! ಕರ್ನಾಟಕದ ಈ ಸ್ಥಳಕ್ಕೆ ಕಾಲಿಟ್ಟರೆ ಮಿಂಚಲಿದೆ ನೀಲಿ ಬಣ್ಣದ ಹೆಜ್ಜೆ ಗುರುತು
ಶೇ. 45 ಕೆತ್ತನೆ ಕೆಲಸಗಳು ಪೂರ್ಣ: ಅಯೋಧ್ಯೆಯಲ್ಲಿ ಮಂದಿರ ನಿರ್ವಣದ ಕಲ್ಲುಗಳ ಕೆತ್ತನೆ ಕಾರ್ಯ ಶೇಕಡ 45 ಪೂರ್ಣಗೊಂಡಿದೆ. ಬೃಹತ್ ಮಂದಿರಕ್ಕೆ ಸುಮಾರು 3.5 ರಿಂದ 4 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಗುಲಾಬಿ ಮರಳುಗಲ್ಲಿನ ಅವಶ್ಯಕತೆ ಇದೆ. ಅದರಲ್ಲಿ ಈಗಾಗಲೇ ಸುಮಾರು 1.1 ಲಕ್ಷ ಕ್ಯೂಬಿಕ್ ಅಡಿಯಷ್ಟು ಕಲ್ಲುಗಳು ಅಯೋಧ್ಯೆಗೆ ರವಾನೆಯಾಗಿವೆ.
ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !