ನವದೆಹಲಿ: ದೇಶದಲ್ಲಿ ಲಾಕ್ಡೌನ್ ಇದ್ದರೂ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಬದಲಿಗೆ ದಿನೇದಿನೆ ಏರುತ್ತಲೇ ಇದೆ. ಹಾಗಾಗಿ ಲಾಕ್ಡೌನ್ ಮುಂದುವರಿಸುವುದು ಅನಿವಾರ್ಯ ಎಂಬುದು ಬಹುತೇಕ ರಾಜ್ಯಗಳ ಅಭಿಪ್ರಾಯ.
ಇಂದು ಎಲ್ಲ ರಾಜ್ಯಗಳ ಕರೊನಾ ಪರಿಸ್ಥಿತಿ ಬಗ್ಗೆ ವಿವರ ಪಡೆಯಲು, ಲಾಕ್ಡೌನ್ ವಿಸ್ತರಣೆಯ ಬಗ್ಗೆ ಅಭಿಪ್ರಾಯ, ಸಲಹೆ ಕೇಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು.
ಬೆಳಗ್ಗೆ 11ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಪಂಜಾಬ್ನ ಅಮರಿಂದರ್ ಸಿಂಗ್, ಬಿಹಾರದ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಹರಿಯಾಣದ ಮನೋಹರ್ ಲಾಲ್ ಖಟ್ಟರ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಛತ್ತೀಸ್ಗಢದ ಭೂಪೇಶ್ ಬಾಘೇಲ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇರಲದ ಪಿಣರಾಯಿ ವಿಜಯನ್, ಒಡಿಶಾದ ನವೀನ್ ಪಟ್ನಾಯಕ್, ಪುದುಚೆರಿಯ ವಿ.ನಾರಾಯಣಸ್ವಾಮಿ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸೇರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದರು.
ಹೋಮ್ ಮೇಡ್ ಮಾಸ್ಕ್ ಧರಿಸಿಯೇ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭರವಸೆಯೊಂದನ್ನು ನೀಡಿದ್ದಾರೆ.
ನಾನು ನಿಮ್ಮೆಲ್ಲರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತೇನೆ. ಏನೇ ಮುಖ್ಯವಾದ ವಿಚಾರಗಳಿದ್ದರೂ ನಾವು ಫೋನ್ನಲ್ಲಿ ಚರ್ಚಿಸಿಕೊಳ್ಳೋಣ. 24×7 ಗಂಟೆಗಳೂ ನಾನು ನಿಮಗಾಗಿ ಲಭ್ಯ ಇರುತ್ತೇನೆ ಎಂದು ಮೋದಿಯವರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಕರೊನಾ ವಿರುದ್ಧ ಹೋರಾಡಬೇಕು. ಕರೊನಾದಿಂದ ಜನರನ್ನು ಉಳಿಸಿಕೊಳ್ಳಲು ನಿಖರ ಕಾರ್ಯತಂತ್ರ ರೂಪಿಸಬೇಕು ಎಂದಿದ್ದಾರೆ.
ಸಂವಾದದಲ್ಲಿ ಪಂಜಾಬ್, ಮಹಾರಾಷ್ಟ್ರ, ದೆಹಲಿ ಮುಖ್ಯಮಂತ್ರಿಗಳು ಏಪ್ರಿಲ್ 30ರವರೆಗೆ ಲಾಕ್ಡೌನ್ ವಿಸ್ತರಿಸಲು ಮನವಿ ಮಾಡಿಕೊಂಡಿವೆ.
ಹಾಗೇ ಕರೊನಾ ವಿರುದ್ಧ ಹೋರಾಟಕ್ಕೆ ಪಶ್ಚಿಮಬಂಗಾಳಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿಎ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಲಾಕ್ಡೌನ್ ವಿಸ್ತರಿಸಿದರೂ ಕೃಷಿ ಮತ್ತು ಕೈಗಾರಿಕ ವಲಯಗಳಿಗೆ ಸ್ವಲ್ಪ ವಿನಾಯಿತಿ ನೀಡಬೇಕು ಎಂದು ಪಂಜಾಬ್ ಸಿಎಂ ಸಲಹೆ ನೀಡಿದ್ದಾರೆ. ಹಾಗೇ ಕರೊನಾ ಟೆಸ್ಟಿಂಗ್ ಕಿಟ್ಗಳನ್ನು ಆದಷ್ಟು ಶೀಘ್ರವಾಗಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಮಾ.24ರಂದು ಲಾಕ್ಡೌನ್ ಘೋಷಣೆಗೂ ಮೊದಲು ಅಂದರೆ ಮಾ.20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಇದೀಗ ಎರಡನೇ ಬಾರಿ ಸಭೆ ನಡೆಸಿದ್ದಾರೆ. (ಏಜೆನ್ಸೀಸ್)