ಚಿತ್ರದುರ್ಗ: ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪ್ರಥಮ ಬಾರಿಗೆ ಚಳ್ಳಕೆರೆ ಪೊಲೀಸ್ ಉಪವಿಭಾಗದಲ್ಲಿ ಜಾರಿಗೊಳಿಸಿರುವ ಆಟೋ ಸ್ನೇಹಿ ಆ್ಯಪ್ನ್ನು ಜಿಲ್ಲೆಯ ಇತರೆಡೆಯೂ ವಿಸ್ತರಿಸುವುದಾಗಿ ಎಸ್ಪಿ ಜಿ.ರಾಧಿಕಾ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆ್ಯಪ್ ಉದ್ಘಾಟಿಸಿ ಮಾತನಾಡಿ, ಇದರಿಂದ ಚಾಲಕರು, ಮಾಲೀಕರಿಗೆ ವಾಹನದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಅನುಕೂಲವಾಗಲಿದೆ ಎಂದರು.
ಪೊಲೀಸರು ಇನ್ನು ಎಲ್ಲೆಂದರಲ್ಲಿ ಆಟೋಗಳನ್ನು ತಡೆದು ಲೈಸೆನ್ಸ್, ಪರ್ಮಿಟ್, ವಿಮೆ ಇತ್ಯಾದಿ ಕೇಳುವುದಿಲ್ಲ. ಈ ಎಲ್ಲ ಮಾಹಿತಿಗಳೂ ಆ್ಯಪ್ನಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದರು.
ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ಆಟೋಗಳಿಗೆ ಸೀರಿಯಲ್ ನಂಬರ್ಗಳಿರುವ ರ್ಲಿೆಕ್ಟರ್ ಸ್ಟಿಕ್ಕರ್ಗಳನ್ನು ಆಟೋದ 2 ಬದಿ ಅಂಟಿಸಲಾಗುವುದು. ಇದರಿಂದ ಆಟೋ ಚಾಲಕರು ತಪ್ಪಿನಿಂದ ನುಣುಚಿಕೊಳ್ಳಲು ಅವಕಾಶವಿಲ್ಲದಂತಾಗುತ್ತದೆ. ಮೋಟಾರು ವಾಹನ ಕಾಯ್ದೆ 84 ಜಿ. ಪ್ರಕಾರ ಎಲ್ಲ ಆಟೋಗಳಲ್ಲೂ ಚಾಲಕರು, ಹೆಸರು, ವಿಳಾಸ, ಪೋಟೊ, ಮೊಬೈಲ್ ಸಂಖ್ಯೆ ಇರುವ ಕಾರ್ಡ್ನ್ನು ಪ್ರಯಾಣಿಕರಿಗೆ ಕಾಣುವಂತೆ ಹಾಕಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಮಾತನಾಡಿ, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲೂಕುಗಳಿಗೆ ಪ್ರತ್ಯೇಕ ಆರ್ಟಿಒ ಹಾಗೂ ಎಆರ್ಟಿಒ ಕಚೇರಿ ಸ್ಥಾಪನೆ ಕುರಿತಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಚಳ್ಳಕೆರೆ ಡಿವೈಎಸ್ಪಿ ಶ್ರೀಧರ್, ಸಿಪಿಐ ಮಂಜುನಾಥ್, ಪಿಎಸ್ಐಗಳಾದ ರಾಘವೇಂದ್ರ, ಲಿಂಗಾರೆಡ್ಡಿ, ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ಗಣೇಶ್, ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹಮ್ಮದ್ ಮತ್ತಿತರ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು.