ಹುಣಸೂರು: ಪಟ್ಟಣದ ಅಗ್ನಿಶಾಮಕ ದಳ ಕಚೇರಿ ಸಮೀಪ ಭಾನುವಾರ ಸಂಜೆ ಆಟೋ ಮಗುಚಿ ಪ್ರಯಾಣಿಕ ಸ್ಥಳದಲ್ಲೆ ಮೃತಪಟ್ಟರೆ, ಆಟೋ ಚಾಲಕ ಕಾಲು ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ ಮಾರುತಿ ಬಡಾವಣೆಯ ನಿವಾಸಿ ಶಿವಕುಮಾರ್ (48) ಮೃತರು. ಪಟ್ಟಣದ ವಾಸಿ, ಆಟೋ ಚಾಲಕ ದಾಸ್ ಗಾಯಗೊಂಡವರು. ಹುಣಸೂರಿನಿಂದ ಬನ್ನಿಕುಪ್ಪೆ ಕಡೆ ಆಟೋದಲ್ಲಿ ತೆರಳುವಾಗ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಶಿವಕುಮಾರ್ಗೆ ತೀವ್ರ ಪೆಟ್ಟು ಬಿದ್ದು ಅಸುನೀಗಿದರು. ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.