ಬೆಂಗಳೂರು: ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯ ಕಡೆಯವರು ಯುವಕನ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿರುವ ಘಟನೆ ವರ್ತೂರಿನ ತಿಗಳರ ಬೀದಿಯಲ್ಲಿ ನಡೆದಿದೆ.
ಪರಸ್ಪರ ಪ್ರೀತಿ ಮಾಡುತ್ತಿದ್ದ ಮುರುಳಿ (25) ಮತ್ತು ಕೃತಿಕಾ (19) ಮಾರ್ಚ್ 29ರಂದು ಚಿಕ್ಕ ತಿರುಪತಿಯಲ್ಲಿ ಮದುವೆ ಮಾಡಿಕೊಂಡಿದ್ದರು. ಇದಾದ ಬಳಿಕ ವರ್ತೂರಿನಲ್ಲಿ ಆರತಕ್ಷತೆ ಸಹ ನಡೆದಿತ್ತು. ಆದರೆ, ಇಬ್ಬರ ಮದುವೆಗೆ ಕೃತಿಕಾ ಮನೆಯವರು ಒಪ್ಪಿರಲಿಲ್ಲ. ಆದರೂ ಮದುವೆ ಆಗಿದ್ದಕ್ಕೆ ಯುವಕನ ಮೇಲೆ ದ್ವೇಷ ಸಾಧಿಸುತ್ತಿದ್ದರು.
ಇದನ್ನೂ ಓದಿ: ಸಸ್ಯಕಾಶಿ ಲಾಲ್ಬಾಗ್ನಲ್ಲಿ ಆಗಸ್ಟ್ 4ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ; ಈ ಬಾರಿ ಥೀಮ್ ಏನು?
ಜುಲೈ 11 ರಂದು ಕೆಲಸ ಮುಗಿಸಿ ಮುರುಳಿ ಮನೆಗೆ ತೆರಳುವಾಗ ರಾತ್ರಿ 9.30ರ ಸುಮಾರಿಗೆ ಕೃತಿಕಾ ಸೋದರ ಮಾವ ನಾಗರಾಜು, ಸಂಬಂಧಿ ಮಂಜುನಾಥ್ ಸೇರಿ ಮೂವರು ಮುರುಳಿ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ.
ಕೊಲೆ ಬೆದರಿಕೆ ಹಾಕಿದ್ದರು
ಕೃತಿಕಾ ಮತ್ತು ಮುರುಳಿ ಕಳೆದ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವ ಬಗ್ಗೆ ಕೃತಿಕಾ ಮನೆಯಲ್ಲಿಯೂ ಮುರುಳಿ ಮಾತನಾಡಿದ್ದ. ಆದರೆ, ಕೃತಿಕಾ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಕೃತಿಕಾ, ಮುರುಳಿಯನ್ನು ವರಿಸಿದ್ದಳು. ಮುರುಳಿ ಹೂವಿನ ವ್ಯಾಪರ ಮಾಡಿಕೊಂಡಿದ್ದ. ಮದುವೆ ಬಳಿಕವೂ ಯುವತಿ ಕುಟುಂಬಸ್ಥರು ಆತನಿಗೆ ಕೊಲೆ ಬೆದರಿಕೆ ಹಾಕಿದ್ದರು.
ಪೊಲೀಸರು ಬುದ್ಧಿ ಹೇಳಿದ್ದರು
ಪ್ರೇಮ ವಿವಾಹದಲ್ಲಿ ಇದೆಲ್ಲ ಮಾಮೂಲಿ ಅಂತ ಮುರುಳಿ ಮೊದಲು ಸುಮ್ಮನಾಗಿದ್ದ. ಆದರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದೆಂದು ಭಾವಿಸಿ, ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದ. ಬಳಿಕ ದಂಪತಿ ತಂಟೆಗೆ ಹೋಗದಂತೆ ಯುವತಿ ಕಡೆಯವರಿಗೆ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ಅಂದಿನಿಂದ ಸುಮ್ಮನಿದ್ದ ಯುವತಿ ಕುಟುಂಬಸ್ಥರು, ಜುಲೈ 11ರ ರಾತ್ರಿ ಇದ್ದಕ್ಕಿದ್ದಂತೆ ಮೂವರಿಂದ ಮುರುಳಿ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: ಮತ್ತಷ್ಟು ಹೆಚ್ಚಾಯ್ತು ಯಮುನಾ ನದಿ ನೀರಿನ ಮಟ್ಟ: ಸಿಎಂ ಕೇಜ್ರಿವಾಲ್ ಮನೆಯ ಸಮೀಪವೇ ಪ್ರವಾಹ
ಪ್ರಮುಖ ಆರೋಪಿ ಎಸ್ಕೇಪ್
ಲಾಂಗ್ ಬೀಸುತ್ತಿದ್ದಂತೆ ಮುರುಳಿ ಕೈ ಅಡ್ಡ ಹಿಡಿದಿದ್ದಾನೆ. ತಕ್ಷಣ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದು, ಇದರಿಂದ ಆತನ ಪ್ರಾಣ ಉಳಿದಿದೆ. ಇಲ್ಲದಿದ್ದರೆ ಆತನ ಪ್ರಾಣಕ್ಕೆ ಕುತ್ತು ಎದುರಾಗ್ತಿತ್ತು. ಈ ಘಟನೆ ಸಂಬಂಧ ಮುರುಳಿ ಪತ್ನಿ ಕೃತಿಕಾ ನೀಡಿದ ದೂರಿನ ಆಧಾರದ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದ್ದು, ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ನಾಗರಾಜ್ ಎಸ್ಕೇಪ್ ಆಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. (ದಿಗ್ವಿಜಯ ನ್ಯೂಸ್)
ಮತ್ತಷ್ಟು ಹೆಚ್ಚಾಯ್ತು ಯಮುನಾ ನದಿ ನೀರಿನ ಮಟ್ಟ: ಸಿಎಂ ಕೇಜ್ರಿವಾಲ್ ಮನೆಯ ಸಮೀಪವೇ ಪ್ರವಾಹ