ಮುಂಬೈ: ರಿಪಬ್ಲಿಕ್ ಟಿವಿ ಸಂಸ್ಥಾಪಕ ಮತ್ತು ಸಂಪಾದಕರಾಗಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿನೊಯ್ ಛೌಬೆ ತಿಳಿಸಿದ್ದಾರೆ.
ನಾನು ಮತ್ತು ನನ್ನ ಪತ್ನಿ ಬುಧವಾರ ರಾತ್ರಿ ಸ್ಟುಡಿಯೋದಿಂದ ಮನೆಗೆ ಮರಳುವಾಗ ಬೈಕ್ನಲ್ಲಿ ಬಂದ ಇಬ್ಬರು ನಮ್ಮನ್ನು ಓವರ್ಟೇಕ್ ಮಾಡಿ, ದಾಳಿ ನಡೆಸಲು ಯತ್ನಿಸಿದರು. ಅವರಿಂದ ಬಚಾವ್ ಆಗಿ ಮನೆಗೆ ಬಂದಾಗ ಅವರು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ಸೆಕ್ಯುರಿಟಿ ಗಾರ್ಡ್ಗಳಿಂದ ತಿಳಿಯಿತು ಎಂದು ಆರೋಪಿಸಿ ಅರ್ನಬ್ ಲಿಖಿತ ದೂರು ದಾಖಲಿಸಿದ್ದರು.
ಅರ್ನಬ್ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಎನ್ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341 (ತಪ್ಪಾಗಿ ಅಡ್ಡಿಪಡಿಸಿದ್ದಕ್ಕಾಗಿ ಶಿಕ್ಷೆ) ಮತ್ತು 504 (ಶಾಂತಿ ಕದಡಲು ಪ್ರಚೋದಿಸಿದಲ್ಲದೆ, ಉದ್ದೇಶಪೂರ್ವಕವಾಗಿ ಅವಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಯಿತು.
ಅರ್ನಬ್ ಕಾರನ್ನು ಓವರ್ಟೇಕ್ ಮಾಡಿದ ಇಬ್ಬರು ದುಷ್ಕರ್ಮಿಗಳಲ್ಲಿ ಓರ್ವ ಕಾರಿನ ಕಿಟಕಿ ಗಾಜನ್ನು ಹೊಡೆಯಲು ಯತ್ನಿಸಿದ್ದಾನೆ. ಅಲ್ಲದೆ, ಇಂಕ್ ಬಾಟಲ್ ಅನ್ನು ಜತೆಗೆ ತಂದಿದ್ದ ಅವರು ಕಾರಿನ ಮೇಲೆಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ನಬ್ ಹಿಂದೆ ಮತ್ತೊಂದು ಕಾರಿನಲ್ಲಿ ಆಗಮಿಸುತ್ತಿದ್ದ ಸೆಕ್ಯುರಿಟಿ ಸಿಬ್ಬಂದಿ ಆರೋಪಿಗಳನ್ನು ಹಿಡಿದು, ಅವರಿಬ್ಬರನ್ನು ಎನ್ಎಂ ಜೋಶಿ ಮಾರ್ಗ್ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ.
ಪಾಲ್ಘಾರ್ ಗುಂಪು ಹತ್ಯೆ ಪ್ರಕರಣವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಳುಕು ಹಾಕಿ, ಟಿವಿ ಕಾರ್ಯಕ್ರಮದಲ್ಲಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಅರ್ನಬ್ ವಿರುದ್ಧ ಕಾಂಗ್ರೆಸ್ ನಾಯಕರುಗಳು ವಿವಿಧೆಡೆ ದೂರು ದಾಖಲಿಸಿದ್ದು, ಇದಾದ ಬೆನ್ನಲ್ಲೇ ದಾಳಿ ಯತ್ನ ನಡೆದಿದೆ ಎಂದು ಅರ್ನಬ್ ಆರೋಪಿಸಿದ್ದಾರೆ. (ಏಜೆನ್ಸೀಸ್)
ಸೋನಿಯಾ ಗಾಂಧಿಗೆ ಅವಹೇಳನ ಆರೋಪ: ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ದೇಶದ ಹಲವೆಡೆ ದೂರು ದಾಖಲು