ಮುಂಬೈ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪತ್ರಕರ್ತ ಹಾಗೂ ರಿಪಬ್ಲಿಕ್ ಟಿವಿಯ ಸಂಸ್ಥಾಪಕ ಹಾಗೂ ಸಂಪಾದಕರೂ ಆಗಿರುವ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಪೊಲೀಸ್ ದೂರುಗಳ ಸುರಿಮಳೆ ಗೈದಿದ್ದಾರೆ.
ಪಲ್ಘಾರ್ ಗುಂಪು ಹತ್ಯೆ ಪ್ರಕರಣವನ್ನು ಸೋನಿಯಾ ಗಾಂಧಿಗೆ ತಳುಕು ಹಾಕಿ, ಅವರ ವಿರುದ್ಧ ತಮ್ಮ ಮಾಧ್ಯಮದಲ್ಲಿ ಅವಹೇಳನಕಾರಿ ಭಾಷೆಯನ್ನು ಉಪಯೋಗಿಸಿ, ಉದ್ದೇಶಪೂರ್ವಕವಾಗಿಯೇ ದ್ವೇಷಪೂರಿತ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ, ಛತ್ತೀಸ್ಗಢದ ಕಾಂಗ್ರೆಸ್ ನಾಯಕರು ರಾಯ್ಪುರ್ದಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ಸಹ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸತ್ಯಜೀತ್ ತಾಂಬೆ ದೂರು ನೀಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅರ್ನಬ್ ವಿರುದ್ಧ ಪ್ರಕರಣ ದಾಖಲಿಸುವಂತೆ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದರೊಟ್ಟಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದು, ಅಲ್ಲಿನ ಇಂಧನ ಸಚಿವ ನಿತಿನ್ ರಾವತ್ ಪುತ್ರ ಕುನಾಲ್ ಸಹ ನಾಗಪುರದಲ್ಲಿ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಗೃಹ ಸಚಿವರು ಕೂಡ ಅರ್ನಬ್ ವಿರುದ್ಧ ಕಿಡಿಕಾರಿದ್ದು, ಪಲ್ಘಾರ್ ಗುಂಪು ಹತ್ಯೆ ಪ್ರಕರಣದಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ಹಾಗೂ ಸೋನಿಯಾ ಗಾಂಧಿ ಅವರನ್ನು ಅವಹೇಳನ ಮಾಡಿದ್ದಕ್ಕೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ಹೀಗೆ ವಿವಿಧೆಡೆ ಅರ್ನಬ್ ವಿರುದ್ಧ ದೂರು ದಾಖಲಾಗಿದ್ದು, ಇದರ ನಡುವೆ ಅರ್ನಬ್ ಕೂಡ ತನ್ನ ಹಾಗೂ ಪತ್ನಿ ಮೇಲೆ ದಾಳಿ ಯತ್ನ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅರ್ನಬ್, ನಾನು ಮತ್ತು ನನ್ನ ಪತ್ನಿ ಬುಧವಾರ ರಾತ್ರಿ ಸ್ಟುಡಿಯೋದಿಂದ ಮನೆಗೆ ಮರಳುವಾಗ ಬೈಕ್ನಲ್ಲಿ ಬಂದ ಇಬ್ಬರು ನಮ್ಮನ್ನು ಓವರ್ಟೇಕ್ ಮಾಡಿ, ದಾಳಿ ನಡೆಸಲು ಯತ್ನಿಸಿದರು. ಅವರಿಂದ ಬಚಾವ್ ಆಗಿ ಮನೆಗೆ ಬಂದಾಗ ಅವರು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ಸೆಕ್ಯುರಿಟಿ ಗಾರ್ಡ್ಗಳಿಂದ ತಿಳಿಯಿತು ಎಂದು ಆರೋಪಿಸಿರುವ ಅರ್ನಬ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹೇಡಿ ಎಂದು ಜರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳು ಸೇರಿದಂತೆ ಮೂವರ ಬರ್ಬರ ಹತ್ಯೆ! ಪೊಲೀಸರ ಎದುರೇ ನಡೆಯಿತು ಘನಘೋರ ಕೃತ್ಯ