ಭಾರತದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರಿದ್ದ ಹೆಲಿಕಾಪ್ಟರ್ ದುರಂತಕ್ಕೆ ಈಡಾಗಿದ್ದು ಯಾಕಿರಬಹುದು ಎಂಬುದು ಇದೀಗ ಬಹುಚರ್ಚಿತ ವಿಷಯ. ಆ ಕುರಿತು ಕೇಂದ್ರ ಸರ್ಕಾರ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ. ಆದರೆ ಈ ಮಧ್ಯೆ, ದುರಂತ ಸಂಭವಿಸಿದ್ದಕ್ಕೆ ಕಾರಣ ಏನಿರಬಹುದು ಎಂಬುದನ್ನು ಬೆಳಗಾವಿಯ ನಿವೃತ್ತ ವಾಯುಪಡೆ ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.
ಸಾಮಾನ್ಯವಾಗಿ ಹೆಲಿಕಾಪ್ಟರ್ಗಳಲ್ಲಿ ಮನುಷ್ಯರಿಂದಾಗುವ ತಪ್ಪುಗಳು ತೀರಾ ಕಡಿಮೆ. ತಾಂತ್ರಿಕ ದೋಷಗಳಿಂದಲೇ ಹೆಚ್ಚು ಅಪಘಾತಗಳಾಗುತ್ತವೆ. ಅದರಲ್ಲೂ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಹೋಗುತ್ತಿದ್ದುದು ತಮಿಳುನಾಡಿನ ಕೂನೂರಿನ ಸಮೀಪದಲ್ಲಿ. ಸಾಮಾನ್ಯವಾಗಿ ಕಣಿವೆ ಪ್ರದೇಶಗಳಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ ಹೋಗುವಾಗ ಅವು ಏರ್ ಪ್ಯಾಕೆಟ್ ಆಗುತ್ತವೆ. ಅಲ್ಲಿ ಗಾಳಿ ಬಹಳ ವಿರಳವಾಗುತ್ತದೆ. ಅದರಿಂದಾಗಿ ವಿಮಾನ/ಹೆಲಿಕಾಪ್ಟರ್ ಒಮ್ಮೆಲೇ ಕೆಳಗೆ ಬರುತ್ತದೆ. ಕೂನೂರು ಕೂಡ ದಟ್ಟ ಅರಣ್ಯ. ಅಲ್ಲೂ ಏರ್ಪ್ಯಾಕೆಟ್ ಆಗುವ ಸಂಭವ ಇರುತ್ತದೆ ಎಂದು ವಾಯುಪಡೆ ನಿವೃತ್ತ ಹಿರಿಯ ಅಧಿಕಾರಿ ಅಪ್ಪಾಜಿರಾವ್ ಕುಲಕರ್ಣಿ ವಿವರಿಸಿದ್ದಾರೆ.
ಅದಲ್ಲದೆ, ಹೆಲಿಕಾಪ್ಟರ್ನಲ್ಲಿ ಅಕಸ್ಮಾತ್ ತಾಂತ್ರಿಕ ಅಡಚಣೆ ಕಾಣಿಸಿಕೊಂಡರೆ, ಆಗಲೂ ಹೆಲಿಕಾಪ್ಟರ್ ದಿಡೀರನೆ ಕೆಳಗೆ ಬರುತ್ತದೆ. ಆಗ ಪೈಲಟ್ ಸಹ ತಕ್ಷಣಕ್ಕೆ ಏನೂ ಮಾಡಲು ಆಗುವುದಿಲ್ಲ. ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಕೆಳಗೆ ಬೀಳುವ ಮುನ್ನ ಏರ್ ಟ್ರಾಫಿಕ್ ಕಂಟ್ರೋಲ್ನಿಂದ ಸಂಪರ್ಕ ಕಡಿದುಕೊಂಡಿತ್ತು. ಇದು ಏಕೆ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕು. ಕೆಲವೊಮ್ಮೆ ಮೊಬೈಲ್ಗಳಲ್ಲಿ ‘ನಾನ್ ಆಪರೇಷನ್ ಏರಿಯಾ’ ಎಂಬ ಸಂದೇಶ ಬರುತ್ತದೆ. ಅದೇ ರೀತಿ ವೈಮಾನಿಕ ಪ್ರಯಾಣದ ವೇಳೆಯೂ ಕೆಲವೊಮ್ಮೆ ಆಗುತ್ತದೆ ಎಂದು ಹೇಳಿದರು.