ನವದೆಹಲಿ: ರಾಷ್ಟ್ರಾದ್ಯಂತ ಮುಂಚೂಣಿಯಲ್ಲಿ ನಿಂತು ಕರೊನಾ ವಿರುದ್ಧ ಸೆಣಸಾಡುತ್ತಿರುವ ಕರೊನಾ ಯೋಧರಿಗಾಗಿ ಸೇನಾಪಡೆ ಯೋಧರು ವಿಶೇಷ ಕೃತಜ್ಞತೆ ಸಲ್ಲಿಸಲು ಮುಂದಾಗಲಿದ್ದಾರೆ. ಈ ಭಾನುವಾರದಂದು ಭಾರತೀಯ ವಾಯುಪಡೆ ಯೋಧರು ದೇಶದ ಉದ್ದಗಲಕ್ಕೂ ವೈಮಾನಿಕ ಪಥಸಂಚಲನ ನಡೆಸಿ, ಕೃತಜ್ಞತೆ ಸಲ್ಲಿಸಲಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಈ ವಿಷಯ ತಿಳಿಸಿದರು. ದೇಶಾದ್ಯಂತ ಮುಂಚೂಣಿಯಲ್ಲಿ ನಿಂತು ಕರೊನಾ ಸೋಂಕು ತಡೆಗಟ್ಟಲು ಹೋರಾಡುತ್ತಿರುವ ಯೋಧರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದ್ದರಿಂದ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರೆಲ್ಲರಿಗೂ ಕೃತಜ್ಞತೆ ಅಪಿಸಲು ಸೇನಾಪಡೆಯ ಮೂರು ವಿಭಾಗಗಳು Gesture of Special Gratitude ಆಯೋಜಿಸಲು ಮುಂದಾಗಿವೆ ಎಂದು ಹೇಳಿದರು.
ಕರೊನಾ ಪಿಡುಗು ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶವೇ ಒಂದಾಗಿ ಸ್ಪಂದಿಸುತ್ತಿದೆ. ದೇಶದ ವಿಷಯ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿದೆ ಎಂದರು.
Gesture of Special Gratitude ಅಂಗವಾಗಿ ಭಾರತೀಯ ವಾಯುಪಡೆ ಯೋಧರು ಮೇ 3ರಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಾಗೂ ಈಶಾನ್ಯದ ಅಸ್ಸಾಂನಿಂದ ಗುಜರಾತ್ನ ಕಛ್ವರೆಗೆ ವೈಮಾನಿಕ ಪಥಸಂಚಲನ ನಡೆಸಲಿದ್ದಾರೆ. ಸೇನಾಪಡೆಯ ಹೆಲಿಕಾಪ್ಟರ್ಗಳು ದೇಶದ ಎಲ್ಲ ಆಸ್ಪತ್ರೆಗಳ ಮೇಲೆ ಹೂವಿನ ಮಳೆಗೈಯ್ಯಲಿದ್ದಾರೆ. ಸಮುದ್ರದ ತಟದುದ್ದಕ್ಕೂ ನಿಲ್ಲಿಸಲಾಗಿರುವ ಯುದ್ಧನೌಕೆಗಳ ದೀಪ ಬೆಳಗಿಸುವ ಮೂಲಕ ನೌಕಾಪಡೆ ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ ಎಂದು ವಿವರಿಸಿದರು.
ಸೇನಾಪಡೆಯ ಎಲ್ಲ ಮೂರು ವಿಭಾಗಗಳ ಮುಖ್ಯಸ್ಥರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಿಗೆ ಸುದ್ದಿಗೋಷ್ಠಿಯಲ್ಲಿ ಸಾಥ್ ನೀಡಿದರು.
ಲೂಧಿಯಾನ ಜೈಲು ಪ್ರವೇಶಿಸಿದ ಕರೊನಾ ವೈರಾಣು, ವಿಚಾರಣಾಧೀನ ಮಹಿಳಾ ಕೈದಿಗೆ ಸೋಂಕು