ಅರಸೀಕೆರೆ: ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಕಳೆದ ಹದಿನೈದು ವರ್ಷದಿಂದ ಮನೆ ಹಕ್ಕುಪತ್ರ ನೀಡಿಲ್ಲವೆಂದು ಆರೋಪಿಸಿ ನಗರಸಭೆ ಕಚೇರಿ ಪ್ರವೇಶದ್ವಾರದಲ್ಲಿ ಅಗತ್ಯ ದಾಖಲೆಗಳನ್ನು ಹಿಡಿದು ಜೇನುಕಲ್ ನಗರ ಬಡಾವಣೆಯ ನಿವಾಸಿ ಶಶಿರೇಖಾ ಶನಿವಾರ ಏಕಾಂಗಿ ಪ್ರತಿಭಟನೆ ನಡೆಸಿದರು.
ನಾವು ಬಡವರು, ವಾಸಕ್ಕೆ ಮನೆಯಿಲ್ಲ, ಬಾಡಿಗೆ ಮನೆಗೆ ನೀಡುವಷ್ಟು ಬಿಡಿಗಾಸು ಕೂಡ ನನ್ನಲ್ಲಿಲ್ಲ, ಕೂಡಿಟ್ಟ ಒಂದಿಷ್ಟು ಹಣವನ್ನು ಮನೆ ಹಕ್ಕುಪತ್ರ ಕೊಡುವುದಾಗಿ ಹೇಳಿ ಬ್ಯಾಂಕಿಗೆ ಕಟ್ಟಿಸಿದ್ದಾರೆ. ನಾನು ಸತ್ತರೆ ಗತಿಯೇನು ಎನ್ನುವಂತಾಗಿದೆ. ಹೇಗಾದರೂ ಸರಿ ನಾವು ವಾಸಿಸಲಿಕ್ಕೆ ಅನುವು ಮಾಡಿಕೊಡುವಂತೆ ಅಳಲುತೋಡಿಕೊಂಡಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡುವುದಾಗಿ ಹೇಳಿ 10 ಸಾವಿರ ರೂ. ವಂತಿಕೆ ಪಾವತಿಸಿಕೊಂಡು ವರ್ಷಗಳೇ ಕಳೆದಿದ್ದರೂ ಮನೆ ಹಕ್ಕುಪತ್ರ ನೀಡಿಲ್ಲ. ಸುಬ್ರಮಣ್ಯ ನಗರ ಬಡಾವಣೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ಮನೆಗಳು ಉಪಯೋಗಕ್ಕೆ ಬಾರದಂತಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಪಾಳುಬಿದ್ದಿರುವ ಮನೆಯನ್ನೇ ಕೊಡಿ, ಯಾರಾದರೂ ಪುಣ್ಯಾತ್ಮರ ಕೈ ಕಾಲು ಹಿಡಿದು ಬಾಗಿಲು, ಕಿಟಕಿ ಹಾಕಿಕೊಂಡು ಜೀವನ ಕಟ್ಟಿಕೊಳ್ಳುತ್ತೇನೆ. ನನಗೆ ನ್ಯಾಯ ದೊರೆಯದಿದ್ದರೆ ಇಲ್ಲಿಯೇ ಪ್ರಾಣ ಬಿಡಲು ಸಿದ್ಧಳಿದ್ದೇನೆ ಎಂದು ಗೋಳಿಟ್ಟರು.
ಪರಿಸರ ಇಂಜಿನಿಯರ್ ರವಿಕುಮಾರ್ ಮತ್ತವರ ಸಿಬ್ಬಂದಿ ಮನವೊಲಿಸುವ ಪ್ರಯತ್ನ ನಡೆಸಿದರೂ, ಬೇಡಿಕೆ ಈಡೇರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಶಶಿರೇಖಾ ಪಟ್ಟುಹಿಡಿದು ಕುಳಿತರು.