More

    ನಾನು ರಾಗಿ ಕದ್ದಿಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಮಾಡಿದ ಅರಸೀಕೆರೆ ಶಾಸಕ ಶಿವಲಿಂಗೇ ಗೌಡ

    ಬೆಳ್ತಂಗಡಿ: ಬಿಜೆಪಿ ಮುಖಂಡರು ತನ್ನ ಮೇಲೆ ಮಾಡಿದ ರಾಗಿ ಕದ್ದ ಆರೋಪ ಸುಳ್ಳು ಎಂಬ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಆಣೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರೂ ಬಂದು ಪ್ರಮಾಣ ಮಾಡಲಿ ಅಥವಾ ದಾಖಲೆಗಳನ್ನು ಬಿಡುಗಡೆ ಮಾಡಲಿ. ದಾಖಲೆಗಳನ್ನು ನೀಡಿದರೆ ಕಾನೂನು ರೀತಿಯ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಹೇಳಿದ್ದಾರೆ.
    ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
    ಬಿಜೆಪಿ ಮುಖಂಡ ರವಿಕುಮಾರ್ ಅವರು ಸಾರ್ವಜನಿಕವಾಗಿ ನನ್ನ ಮೇಲೆ ರಾಗಿ ಕಳ್ಳ ಎಂದು ಆರೋಪ ಮಾಡಿದ್ದಾರೆ. ಆಗಲೇ ಅವರಿಗೆ ದಾಖಲೆಗಳನ್ನು ನೀಡಿ ಅಥವಾ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬನ್ನಿ ಎಂದು ಹೇಳಿದ್ದೆ. ಆದರೆ ಆರೋಪ ಮಾಡಿದವರು ಯಾವುದಕ್ಕೂ ಬರಲಿಲ್ಲ. ಆದ್ದರಿಂದ ನಾನೇ ಧರ್ಮಸ್ಥಳಕ್ಕೆ ಬಂದು ನಾನು ಒಂದು ಕೆ.ಜಿ. ರಾಗಿಯನ್ನೂ ಕದ್ದಿಲ್ಲ. ನಾನು ರಾಗಿ ಕಳ್ಳ ಅಲ್ಲ ಎಂದು ಪ್ರಮಾಣ ಮಾಡಿದ್ದೇನೆ ಎಂದು ತಿಳಿಸಿದರು.
    ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಹೆಗ್ಗಡೆಯರಿಗೆ ಶಿವಲಿಂಗೇ ಗೌಡ ಅಭಿನಂದನೆ ಸಲ್ಲಿಸಿದರು. ಶಾಸಕರೊಂದಿಗೆ ಅರಸೀಕೆರೆಯಿಂದ ಅವರ ಅಭಿಮಾನಿಗಳೂ ಆಗಮಿಸಿದ್ದರು.

    ಜನಪ್ರತಿನಿಧಿಗಳ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಮಾತುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ರಾಜಕೀಯ ಮಾಡುವವರು ಗೌರವಯುತವಾಗಿ ರಾಜಕೀಯ ಮಾಡಬೇಕು. ಕೊಳಕು ರಾಜಕೀಯಕ್ಕೆ ಇಳಿಯಬಾರದು. ಅದಕ್ಕಾಗಿ ಇಲ್ಲಿಗೆ ಬಂದು ಪ್ರಮಾಣ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಅಶಾಂತಿ ನಿರ್ಮಾಣವಾಗಿದ್ದು, ಅಶಾಂತಿ ಶಮನವಾಗಿ ನೆಮ್ಮದಿ ನೆಲೆಸಲಿ ಎಂದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದ್ದೇನೆ.
    ಶಿವಲಿಂಗೇಗೌಡ, ಅರಸೀಕೆರೆಯ ಜೆಡಿಎಸ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts